ADVERTISEMENT

‘ವಸ್ತುಪ್ರದರ್ಶನ ಮಕ್ಕಳ ಜ್ಞಾನ ಹೆಚ್ಚಳಕ್ಕೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 5:51 IST
Last Updated 9 ಜನವರಿ 2017, 5:51 IST

ಲಿಂಗಸುಗೂರು: ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಕುರಿತಂತೆ ಸಾಹಿತ್ಯ, ಸಂಸ್ಕೃತಿ, ಐತಿಹಾಸಿಕ, ವೈಜ್ಞಾನಿಕ, ಧಾರ್ಮಿಕ ವಿಷಯ ಆಧಾರಿತ ವಸ್ತುಪ್ರದರ್ಶನವು ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಸ್ಪಂದನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾಂತೇಶ ಗೌಡರ ಹೇಳಿದರು.

ಶನಿವಾರ ಕೆಂಬ್ರಿಡ್ಜ್‌ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನದಲ್ಲಿ ಮಾತನಾಡಿ, ಮಕ್ಕಳಿಗೆ ವಿಷಯ ಆಧಾರಿತ ವಸ್ತು ಪ್ರದರ್ಶನ ನಡೆಸಲು ಶಿಕ್ಷಕ ಸಮೂಹ ಪ್ರೇರಣೆ ನೀಡಿದ್ದರೆ, ಪಾಲಕರು ಪ್ರೋತ್ಸಾಹಿಸಿ ವೀಕ್ಷಿಸಲು ಆಗಮಿಸಿದ ನಾಗರಿಕ ಸಮೂಹವನ್ನೆ ಬೆಚ್ಚಿಬೀಳಿಸುವಂತೆ ಮಾಡಿದ್ದು ಖುಷಿ ತಂದಿದೆ. ಮಕ್ಕಳ ಕೌಶಲ್ಯ ಪ್ರದರ್ಶಿಸಲು ಈ ವೇದಿಕೆ ಸದ್ಬಳಕೆಯಾಗಿದೆ ಎಂದರು.

ವಸ್ತುಪ್ರದರ್ಶನ: ಮಾದರಿ ಗ್ರಾಮ, ಮಳೆ ನೀರು ಸಂಗ್ರಹಣೆ, ಆಯುರ್ವೇದ ಪದ್ಧತಿ ಬಳಕೆ, ಅರಣ್ಯ ಸಂರಕ್ಷಣೆ, ವಿವಿಧ ರಾಜ್ಯದ ಆಹಾರ ಪದ್ಧತಿ, ಐತಿಹಾಸಿಕ ಕೋಟೆ ಕೊತ್ತಲುಗಳು, ಹೈಕೋರ್ಟ, ಸುಪ್ರಿಂ ಕೋರ್ಟ್‌, ಪಾರ್ಲಿಮೆಂಟ್‌ ಮಾದರಿ, ಪ್ರಾಣಿ ಸಂಗ್ರಹಾಲಯ, ದೇವಸ್ಥಾನಗಳ ಮಾದರಿ, ಚೆನ್ನಸ್ವಾಮಿ ಕ್ರೀಡಾಂಗಣ, ವಿವಿಧ ಧರ್ಮದ ಆಚರಣೆಗಳ ಜಾಗೃತಿ, ಪ್ರಾಚೀನ ನಾಗರಿಕತೆ ಬದುಕು.

ಭಾವೈಕ್ಯತೆ ಸಂದೇಶದ ಆಚರಣೆಗಳು, ವಿದ್ಯುತ್‌ ಉತ್ಪಾದನೆ ಪದ್ಧತಿ, ಒಕ್ಕಲುತನದಲ್ಲಿ ತಂತ್ರಜ್ಞಾನ ಬಳಕೆ, ಜಾನಪದ ವಸ್ತುಗಳ ಬಳಕೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತಿಗಳ ಭಾವಚಿತ್ರ ಪ್ರದರ್ಶನ, ಭಾರತದ ಪ್ರವಾಸಿ ತಾಣಗಳು, ವಿವಿಧ ಕ್ರೀಡೆಗಳ ಮೈದಾನ ಚಿತ್ರಣ ಸೇರಿದಂತೆ ನೂರಾರು ಮಾದರಿಗಳು ಮಕ್ಕಳು ಸಿದ್ಧಪಡಿಸಿ ವಿವರಣೆ ಹೇಳುತ್ತಿರುವುದನ್ನು ಕಂಡು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಸ್ತುಪ್ರದರ್ಶನ ವೀಕ್ಷಿಸಿದ ಪಾಲಕರಾದ ಪ್ರಭುಲಿಂಗ ಮೇಗಳಮನಿ, ಮಹಾದೇವಯ್ಯ ಗೌಡೂರು ಮಾತನಾಡಿ,  ಶಿಕ್ಷಕರು ಹೇಳಿಕೊಟ್ಟ ಮಾದರಿಗಳನ್ನು ಸಿದ್ಧಪಡಿಸಿ ಅಚ್ಚುಕಟ್ಟಾಗಿ ಪ್ರದರ್ಶನ ಮಾಡುವ ಜೊತೆಗೆ ಆ ಎಲ್ಲ ಮಾದರಿಗಳ ಬಗ್ಗೆ ಪರಿಪೂರ್ಣವಾದ ಮಾಹಿತಿ ನೀಡುತ್ತಿರುವ ಮಕ್ಕಳ ಪ್ರತಿಭೆ ನಮ್ಮನ್ನು ಅಚ್ಚರಿಗೊಳಿಸಿದೆ. ಶಿಕ್ಷಣ ಸಂಸ್ಥೆಗಳು ಇಂತಹ ಪ್ರದರ್ಶನಕ್ಕೆ ಆಗಾಗ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.