ADVERTISEMENT

ಶಾಂತಿಯುತ ಮತದಾನಕ್ಕೆ ಸಿದ್ಧತೆ

ಉಪ ಚುನಾವಣೆ 64 ಅತಿ ಸೂಕ್ಷ್ಮ, 84 ಸೂಕ್ಷ್ಮ ಮತಗಟ್ಟೆಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:14 IST
Last Updated 13 ಫೆಬ್ರುವರಿ 2016, 7:14 IST
ದೇವದುರ್ಗ ವಿಧಾನಸಭಾ ಉಪಚುನಾವಣೆಯ ಪ್ರಯುಕ್ತ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಮತಯಂತ್ರಗಳನ್ನು ಪರೀಕ್ಷಿಸಿದರು
ದೇವದುರ್ಗ ವಿಧಾನಸಭಾ ಉಪಚುನಾವಣೆಯ ಪ್ರಯುಕ್ತ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಮತಯಂತ್ರಗಳನ್ನು ಪರೀಕ್ಷಿಸಿದರು   

ದೇವದುರ್ಗ: ಚುನಾವಣಾ ಆಯೋಗದ ನಿರ್ದೇಶನದಂತೆ ಶಾಂತಿಯುತ ಮತದಾನಕ್ಕಾಗಿ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಡಾ. ಆರ್‌.ಸೆಲ್ವಮಣಿ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಫೆ. 13ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ 2,80,606 ಒಟ್ಟು ಮತದಾರರು ಇದ್ದು, ಇವರ ಪೈಕಿ 140160 ಪುರುಷರು, 1,40,441 ಮಹಿಳೆಯರು ಮತ್ತು 24 ತೃತೀಯ ಲಿಂಗಿಗಳು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದರು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಿಂದಿನ ಚುನಾವಣೆಗಳ ಚರಿತ್ರೆಯನ್ನು ಗಮನಿಸಿ 64 ಅತಿ ಸೂಕ್ಷ್ಮ, 84 ಸೂಕ್ಷ್ಮ ಮತ್ತು 100 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗುತ್ತದೆ.

ಮತ ಯಂತ್ರಗಳು ಕೈಕೊಡದಂತೆ ಎಲ್ಲಕಡೆ ಅಧಿಕಾರಿಗಳು ಎಚ್ಚರವಹಿಸಲು ಸೂಚಿಸಲಾಗಿದೆ. ಆಕಸ್ಮಿಕವಾಗಿ ಮತಯಂತ್ರಗಳು ಕೈಕೊಟ್ಟ ಸಂದರ್ಭದಲ್ಲಿ ಅಂಥ ಸ್ಥಳಕ್ಕೆ ತುರ್ತಾಗಿ ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಒಂದು ಮತಗಟ್ಟೆಗೆ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಸುಮಾರು 7 ಜನರನ್ನು ನಿಯೋಜಿಸಲಾಗಿದೆ. ಒಟ್ಟು 247 ಮತಗಟ್ಟೆಗಳಿಗೆ 1,729 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಇದರಲ್ಲಿ ಶೇ 10ರಷ್ಟು ಸಿಬ್ಬಂದಿಯನ್ನು ಕಾಯ್ದಿರಿಸಲಾಗುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಅರೆ ಸೇನಾಪಡೆಯನ್ನು ಯೋಧರನ್ನು ಹೊರತುಪಡಿಸಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗಾಗಿ ಹಾಕಲಾಗಿದೆ ಎಂದು ತಿಳಿಸಿದರು.

ವಿಧಾನಸಭಾ ಉಪಚುನಾವಣೆಗೆ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ವಿಮಾ ಕಂಪೆನಿ ಸೇರಿದಂತೆ ಶಾಲಾ, ಕಾಲೇಜುಗಳ ಶಿಕ್ಷಕ, ಉಪನ್ಯಾಸಕರನ್ನು ಈ ಬಾರಿ ಶೇ 80ರಷ್ಟು ಸಿಬ್ಬಂದಿಯನ್ನು ರಾಯಚೂರು ತಾಲ್ಲೂಕಿನಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶುಕ್ರವಾರ ರಾಯಚೂರಿನಿಂದ 6ಗಂಟೆಗೆ ಹೊರಟ ಚುನಾವಣಾ ಸಿಬ್ಬಂದಿ 8ಗಂಟೆಗೆ ದೇವದುರ್ಗ ತಲುಪಿದ್ದಾರೆ.

***
ಚುನಾವಣೆಯಲ್ಲಿ ಎಲ್ಲರ ಸಹಕಾರ ಅಗತ್ಯ. ಶಾಂತಿಯುತ ಮತದಾನ ನಡೆಯುವುದಕ್ಕಾಗಿಯೇ ಎಲ್ಲ ಪೂರ್ವ ಸಿದ್ಧತೆ  ಕೈಗೊಳ್ಳಲಾಗಿದೆ.
-ಡಾ. ಆರ್‌. ಸೆಲ್ವಮಣಿ,
ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.