ADVERTISEMENT

‘ಹಮಾಲರಿಗೆ ಪರವಾನಗಿ, ವಿಮೆ ಜಾರಿಗೊಳಿಸಿ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 5:19 IST
Last Updated 2 ಡಿಸೆಂಬರ್ 2017, 5:19 IST

ಸಿಂಧನೂರು: ಎಪಿಎಂಸಿ ಯಾರ್ಡ್‌ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಹಮಾಲಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಪರವಾನಗಿ, ವಿಮಾ ಯೋಜನೆ, ಗುರುತಿನ ಚೀಟಿ ಮತ್ತು ಸಮವಸ್ತ್ರ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸಿಐಟಿಯು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಮತ್ತು ಎಐಟಿಯುಸಿ ಹಮಾಲರ ಸಂಘದ ತಾಲ್ಲೂಕು ಘಟಕದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಯಾರ್ಡ್‌ನಲ್ಲಿ ಮೆರವಣಿಗೆ ನಡೆಸಿದ ಹಮಾಲಿ ಕಾರ್ಮಿಕರು, ‘ಕಾಯಕ ನಿಧಿ ಯೋಜನೆ ಯಲ್ಲಿ ಉಂಟಾಗಿರುವ ಹಲವಾರು ಲೋಪಗಳನ್ನು ಸರಿಪಡಿಸಬೇಕು. ಮರಣ ಹೊಂದಿದ ಹಮಾಲಿ ಕಾರ್ಮಿಕರಿಗೆ ಆಮ್ ಆದ್ಮಿ ಬಿಮಾ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಕ್ಕೆ ಬೆಂಗಳೂರಿಗೆ ಅಲೆಯಬೇಕಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದರು.

‘ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಎಪಿಎಂಸಿ ಯಾರ್ಡ್‌ನಲ್ಲಿ ಪರವಾನಗಿ ಪಡೆದು ಕೆಲಸ ಮಾಡುತ್ತಿರುವ 127 ಹಮಾಲರಿಗೆ ಹೊಸಲಾಪುರ ಡಿ ಸರ್ವೆ ನಂ.9/1ರಲ್ಲಿ ಹಕ್ಕು ಪತ್ರ ಕೊಡಲಾಗಿದ್ದು, ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಗ್ರಾಮಾಂತರ ಪ್ರದೇಶದ ಹಮಾಲರಿಗೆ ವಸತಿ ಯೋಜನೆಯಡಿ ತಾಲ್ಲೂಕು ಪಂಚಾಯಿತಿಯಿಂದ ಮನೆ ಮಂಜೂರು, ರದ್ದು ಮಾಡಿದ ಪರವಾನಗಿ ಪುನಃ ನವೀಕರಿಸಬೇಕು’ ಎಂದರು.

ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಘಟಕದ ಉಪಾಧ್ಯಕ್ಷ ತಿಪ್ಪಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮಣ್ಣ, ಹಮಾಲರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಭಾಷುಮಿಯಾ ಮಾತನಾಡಿದರು. ಎಂಪಿಎಂಸಿ ಕಾರ್ಯದರ್ಶಿ ಅವರಿಗೆ ಹನುಮಂತಪ್ಪ, ಯಂಕಪ್ಪ ಕೆಂಗಲ್, ಬಂಡಾರೆಪ್ಪ ಮನವಿ ಪತ್ರ ಸಲ್ಲಿಸಿದರು.

ಮುಖಂಡರಾದ ವೆಂಕನಗೌಡ ಗದ್ರಟಗಿ, ಮರಿಸ್ವಾಮಿ, ಶರಣಪ್ಪ ಗೊರೇಬಾಳ, ಆದಪ್ಪ ಬಿರಾದರ್, ಹನುಮಂತಪ್ಪ ಎಚ್, ಅಮರೇಶ ನಾಯಕ, ಸೈಯ್ಯದ್ ಜಿಲಾನಿಖಾದ್ರಿ, ಮರಿಯಪ್ಪ, ದೇವೇಂದ್ರಪ್ಪ, ರಾಮಣ್ಣ ಅರಗಿನಮರಕ್ಯಾಂಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.