ಕವಿತಾಳ: ಸಮೀಪದ ಹಿರೇದಿನ್ನಿ ಮರಕಂದಿನ್ನಿ ರಸ್ತೆಯಲ್ಲಿ ಸುಂಕನೂರು ಹಳ್ಳದ ಸೇತುವೆ ಸಂಪೂರ್ಣ ಕುಸಿದಿದ್ದು, ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.
‘ನಮ್ಮ ಊರು ನಮ್ಮ ಗ್ರಾಮ’ 2ನೇ ಹಂತದ ಯೋಜನೆ ಅಡಿ ಅಂದಾಜು ₹1.89 ಕೋಟಿ ವೆಚ್ಚದಲ್ಲಿ 4.5 ಕಿ.ಮೀ. ರಸ್ತೆ ದುರಸ್ತಿ ಮತ್ತು ಸೇತುವೆ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಮೂಲದ ಮೇ. ರಘು ಇನ್ಫಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಪೂರ್ಣಗೊಳಿಸಿದೆ.
ಹಿರೇದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಜನರು ಪಟ್ಟಣಗಳಿಗೆ ತೆರಳಲು ಈ ರಸ್ತೆಯನ್ನು ಅವಲಂಬಿಸಿದ್ದು ಕಳೆದ ಸೆಪ್ಟಂಬರ್ನಲ್ಲಿ ಸುರಿದ ಮಳೆಗೆ ಸೇತುವೆಯ ಒಳಮೈ ಸಂಪೂರ್ಣ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರಿಗೆ ಒಳಮೈ ಕುಸಿದಿರುವುದು ಗಮನಕ್ಕೆ ಬಾರದ ಕಾರಣ ನಿರಾತಂಕವಾಗಿ ವಾಹನಗಳು ಸಂಚರಿಸುತ್ತಿವೆ. ಭತ್ತ ಸಾಗಣೆ ಮಾಡುವ ಭಾರಿ ವಾಹನಗಳ ಓಡಾಟ ಹೆಚ್ಚುತ್ತಿದ್ದು ಅಪಾಯ ಸಂಭವಿಸುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಾರೆ.
ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪೊತ್ನಾಳ ಗ್ರಾಮದ ಹನುಮಂತ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.