ADVERTISEMENT

‘ಅನ್ಯಭಾಷಿಗರ ಹಾವಳಿ ವಿರುದ್ಧ ಧ್ವನಿಯೆತ್ತಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 10:07 IST
Last Updated 20 ನವೆಂಬರ್ 2017, 10:07 IST

ಚನ್ನಪಟ್ಟಣ: ಪರಭಾಷಿಗರಿಂದ ಕನ್ನಡಿಗರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರು ಧ್ವನಿ ಎತ್ತದಿದ್ದರೆ ಕನ್ನಡಿಗರಿಗೆ ಉಳಿಗಾಲವಿಲ್ಲ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಎಚ್ಚರಿಸಿದರು.

ಪಟ್ಟಣದ ಕರಬಲ ಮೈದಾನದಲ್ಲಿ ಮುತ್ತುಮಾರಮ್ಮ ಗೆಳೆಯರ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ರಾಜ್ಯ ದಾದ್ಯಂತ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಎಚ್ಚರ ಅವಶ್ಯಕವಾಗಿದೆ ಎಂದು ಹೇಳಿದರು.

ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡತನವನ್ನು ಮರೆತು ಬೇರೆ ಭಾಷೆಗಳಿಗೆ ಮಾರು ಹೋಗುತ್ತಿ ರುವುದು ವಿಷಾದನೀಯ. ಕನ್ನಡಕ್ಕಾಗಿ ಹೋರಾಡದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡವನ್ನು ದುರ್ಬೀನು ಹಾಕಿ ಹುಡುಕುವ ಪರಿಸ್ಥಿತಿ ಬರುತ್ತದೆ. ಇದರ ಬಗ್ಗೆ ಕನ್ನಡಗರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ADVERTISEMENT

ಇಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವವರು ಬೇರೆ ಭಾಷಿಕರಾದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವುದು ಶ್ಲಾಘನೀಯವಾಗಿದೆ. ಎಲ್ಲರೂ ಕನ್ನಡ ಪ್ರೇಮವನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ ಮಾತನಾಡಿ, ‘ಕನ್ನಡಾಭಿಮಾನ ಎನ್ನುವುದು ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ತುಂಬಿರಬೇಕು. ಕನ್ನಡ ಭಾಷೆ ಬೇರೆ ರಾಜ್ಯದವರ ಹಿಡತಕ್ಕೆ ಸಿಲುಕಿ ನರಳುತ್ತಿದೆ.

ಮುಂದಿನ ದಿನಗಳಲ್ಲಿ ಇದು ಬದಲಾಗಬೇಕಿದೆ. ಕೆಚ್ಚೆದೆಯ ಕನ್ನಡಿಗರಾದ ನಾವು ಕನ್ನಡವನ್ನು ಉಳಿಸುವಲ್ಲಿ ಶ್ರಮ ವಹಿಸಬೇಕಿದೆ. ಕನ್ನಡದಲ್ಲಿ ಸಹಿ ಮಾಡ ಬೇಕು. ಬ್ಯಾಂಕುಗಳಲ್ಲಿ ಚಲನ್ ಗಳನ್ನು ತುಂಬುವಾಗ ಕನ್ನಡ ಬಳಸಬೇಕು’ ಎಂದು ಮನವಿ ಮಾಡಿದರು. ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಮಣಯ್ಯ, ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.