ಮಾಡಬಾಳ್(ಮಾಗಡಿ): ಅಪೌಷ್ಟಿಕತೆಯಿಂದ ನರಳುತ್ತಿರುವ ಆದಿವಾಸಿ ಗಿರಿಜನ ಇರುಳಿಗರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಜಿಲ್ಲಾ ಇರುಳಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಇರುಳಿಗ ತಿಳಿಸಿದರು.
ಶನಿವಾರ ಜೇನುಕಲ್ಲು ಪಾಳ್ಯದ ಇರುಳಿಗರ ಹಾಡಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರ ಆರಂಭಿಸಬೇಕು. ತಮಿಳು ನಾಡಿನಲ್ಲಿ ಇರುಳಿಗರನ್ನು ಆಧೀಮ ಬುಡಕಟ್ಟು ಪಟ್ಟಿಗೆ ಸೇರಿಸಿ ವಿಶೇಷ ಸವಲತ್ತು ನೀಡುತ್ತಿದ್ದಾರೆ. ರಾಜ್ಯದಲ್ಲಿನ ವನವಾಸಿ ಇರುಳಿಗರನ್ನು ಆಧೀಮ ಬುಡಕಟ್ಟು ಪಟ್ಟಿಗೆ ಸೇರಿಸಬೇಕು. ಆದಿವಾಸಿ ಮಹಿಳೆಯರು ರಚಿಸಿಕೊಂಡಿರುವ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದರು.
ಅರಣ್ಯದಲ್ಲಿ ಇರುವ ಬುಡಕಟ್ಟು ದೈವಗಳ ಗುಡಿಗಳು ಮತ್ತು ಸಮಾಧಿ ಸ್ಥಳಗಳನ್ನು ಸ್ಮಾರಕಗಳೆಂದು ಸಂರಕ್ಷಿಸಬೇಕು. ಮಾಗಡಿಯಿಂದ ಜೇಣುಕಲ್ಲು ಇರುಳಿಗರ ಹಾಡಿಯ ಮಾರ್ಗವಾಗಿ ಎರೆಕಳ್ಳಿ ಮೂಲಕ ರಾಮನಗರ ಕೇಂದ್ರಕ್ಕೆ ಸರ್ಕಾರಿ ಬಸ್ ಸೇವೆ ನೀಡಿ. ವನವಾಸಿಗಳಿಗೆ ಅರಣ್ಯದಲ್ಲಿ ಉಳುಮೆ ಮಾಡಿಕೊಂಡಿರುವ ಭೂಮಿಯ ದಾಖಲೆಗಳನ್ನು ನೀಡಬೇಕು ಎಂದು ಸಂಘದ ಅಧ್ಯಕ್ಷರು ತಿಳಿಸಿದರು.
ಸಚಿವ ಎಚ್.ಆಂಜನೇಯ ಅವರಿಗೆ ಬುಡಕಟ್ಟು ಸಂಪ್ರದಾಯದಂತೆ ಬಿದಿರಿನಿಂದ ತಯಾರಿಸಿರುವ ಟೋಪಿ ಧರಿಸಿ, ಮೇಕೆಯ ಚರ್ಮದಿಂದ ತಯಾರಿಸಿರುವ ಉಡುಪು ತೊಡಿಸಿ ಗೌರವಿಸಲಾಗುವುದು. ಜೇನು, ಬೇಲ್ಲದ ಹಣ್ಣು, ಅರಣ್ಯದ ಸೊಪ್ಪಿನಿಂದ ತಯಾರಿಸಿರುವ ವನವಾಸಿಗಳ ಆಹಾರವನ್ನು ಬಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಂಘದ ಅಧ್ಯಕ್ಷರು ತಿಳಿಸಿದರು.
ಜೇನುಕಲ್ಲು ಪಾಳ್ಯ ಇರುಳಿಗ ಸಮುದಾಯದ ಮುಖಂಡರಾದ ಬರಿಯಪ್ಪ, ಮುನಿರಾಜಯ್ಯ, ಪಾಪಯ್ಯ. ಕಾಳಯ್ಯ, ಕುಂಟಯ್ಯ ಹಾಡಿಯ ಸಮಸ್ಯೆಗಳ ಬಗ್ಗೆ ನೋವನ್ನು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.