ಕನಕಪುರ: ಹೆಚ್ಚು ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಿ ಸರಳ ಸಾಮೂಹಿಕ ಮದುವೆಗೆ ಹೆಚ್ಚು ಒತ್ತು ನೀಡಬೇಕು ಎಂದು ಆದಿಚುಂಚನಗಿರಿ ಶಾಖಾಮಠದ ಅನ್ನದಾನನಾಥೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೋಡಿಹಳ್ಳಿ ಜಾಮೀಯ ಮಸೀದಿಯಲ್ಲಿ ಎಂಎಚ್ಟಿ ಗ್ರೂಪ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ವಧರ್ಮದ ಸಾಮೂಹಿಕ ವಿವಾಹದಲ್ಲಿ ನೂತನ ದಂಪತಿಗಳನ್ನು ಹಾರೈಸಿ ಆರ್ಶೀರ್ವಚನ ನೀಡಿದರು.
ಜಗತ್ತಿನ ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಜಾತಿಯನ್ನು ಬಿಟ್ಟರೆ ಯಾವುದೇ ಜಾತಿ ಇಲ್ಲ. ಎಲ್ಲರನ್ನೂ ಸಮಾನವಾಗಿ, ಸಹೃದಯದಿಂದ ಕಾಣುವುದೇ ನಿಜವಾದ ಮನುಷ್ಯ ಧರ್ಮ ಎಂದರು.
ಭಾರತ ಎಲ್ಲ ಜಾತಿ, ಭಾಷೆ, ಧರ್ಮಗಳಿಂದ ಕೂಡಿದ ಜಾತ್ಯತೀತ ರಾಷ್ಟ್ರ, ಇಲ್ಲಿ ಅವರದೇ ಭಾಷೆ ಧರ್ಮಗಳಿದ್ದರೂ ಎಲ್ಲರೂ ಒಂದಾಗಿ ಅನೋನ್ಯವಾಗಿ ಬಾಳುತ್ತಿದ್ದೇವೆ. ಸಂವಿಧಾನದಲ್ಲೂ ಎಲ್ಲಾ ಧರ್ಮ, ಜಾತಿಯನ್ನು ಸಮಾನತೆಯಿಂದ ಬಾಳಲು ಅವಕಾಶ ಮಾಡಿಕೊಟ್ಟಿದೆ.
ಪ್ರಾಣಿ ಪಕ್ಷಿಗಳು ಸೌಹಾರ್ದಯುತವಾಗಿ ಬಾಳ್ವೆ ನಡೆಸುತ್ತಿವೆ. ಸಮಾಜದಲ್ಲಿನ ಕೆಲವು ದುಷ್ಟ ಶಕ್ತಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುವುದನ್ನು ಬಿಟ್ಟರೆ ಭಾರತ ದೇಶವು ಪ್ರಪಂಚದಲ್ಲೇ ಮಾದರಿ ರಾಷ್ಟ್ರವಾಗಲಿದೆ. ಸಮಾಜದಲ್ಲಿ ಇಂತ ಸರಳ ವಿವಾಹಗಳು ನಡೆಯಬೇಕು. ಜತೆಗೆ ಸರ್ವಧರ್ಮವನ್ನು ಒಗ್ಗೂಡಿಸುವಂತ ಇಂತಹ ಕೆಲಸ ಜರುಗಬೇಕೆಂದು ಕಾರ್ಯಕ್ರಮ ಕುರಿತು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕ್ರೈಸ್ತ ಪಾದ್ರಿ ವಿಜಯ್, ಮುಸಲ್ಮಾನರ ಧರ್ಮಗುರುಗಳು ತಮ್ಮ ಸಂದೇಶ ನೀಡಿದರು. ಸಾಮೂಹಿಕ ವಿವಾಹದಲ್ಲಿ ಅವರವರ ಧರ್ಮದ ಪದ್ದತಿಯಂತೆ ವಿವಾಹವನ್ನು ನೆರವೇರಿಸಲಾಯಿತು. 40 ಹಿಂದು, 40 ಮುಸಲ್ಮಾನ, 1 ಕ್ರೈಸ್ತ ಜೋಡಿಗಳು ನವದಂಪತಿಗಳಾಗಿ ಹೊಸಬಾಳಿಗೆ ಕಾಲಿಟ್ಟರು.
ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್, ಎಂ.ಎಚ್.ಟಿ ಗ್ರೂಫ್. ವ್ಯವಸ್ಥಾಪಕ ಆಜೀ ಮಷ್ತಾಕ್ ಅಹಮದ್ ಸಾಬ್ ಉಪಸ್ಥಿತರಿದ್ದರು.
ಜನಸಂಖ್ಯಾ ಸ್ಫೋಟ ಸಮಾಜದ ಅಭಿವೃದ್ಧಿಗೆ ದೊಡ್ಡ ಸವಾಲಾಗಿದೆ. ಯಾವ ಧರ್ಮವೇ ಇರಲಿ ಒಂದು ಅಥವಾ ಎರಡು ಮಕ್ಕಳಿಗೆ ನಿಬಂಧನೆ ಮಾಡಿಕೊಳ್ಳಬೇಕು
ಮುಮ್ಮಡಿ ನಿರ್ವಾಣಸ್ವಾಮಿ, ದೇಗುಲಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.