ADVERTISEMENT

ಕಲಾಪದಿಂದ ದೂರ ಉಳಿದ ವಕೀಲರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 9:44 IST
Last Updated 18 ಮಾರ್ಚ್ 2017, 9:44 IST

ರಾಮನಗರ: ಬಾಲಕಿಯ ಅಪಹರಣ ಪ್ರಕರಣವೊಂದರಲ್ಲಿ ವಕೀಲರೊಬ್ಬರನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಆರೋಪಿಯನ್ನಾಗಿಸಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವಕೀಲರು ಶುಕ್ರವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದರು.

‘ಚನ್ನಪಟ್ಟಣ ತಾಲ್ಲೂಕಿನ ಎಂ.ಕೆ. ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡಮಳೂರಿನ ಬಾಲಕಿಯನ್ನು ಅದೇ ಗ್ರಾಮದ ಯುವಕನೊಬ್ಬ ಅಪಹರಿಸಿರುವುದಾಗಿ ಪೊಲೀಸರು ಪೋಕ್ಸೊ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಂದೀಪ್‌ ಎಂಬುವರಿಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ವಕೀಲ ಎಂ.ಡಿ. ಕುಮಾರಸ್ವಾಮಿ ಅವರನ್ನು ನಾಲ್ಕನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಸಂತ್ರಸ್ತೆಯು ನೀಡಿರುವ ದೂರು ಮತ್ತು ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಗಳಲ್ಲಿ ಎಲ್ಲಿಯೂ ವಕೀಲರ ಹೆಸರು ಇಲ್ಲ. ಹೀಗಿದ್ದೂ ಮೊದಲ ಆರೋಪಿಯ ಹೇಳಿಕೆಯ ನೆಪದಲ್ಲಿ ಪೊಲೀಸರು ತಾವೇ ಉದ್ದೇಶಪೂರ್ವಕವಾಗಿ ವಕೀಲರ ಹೆಸರು ಸೇರಿಸಿದ್ದಾರೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಕೆ. ಶಾಂತಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪ್ರಕರಣದಲ್ಲಿ ಪಕ್ಷಪಾತ ಎಸಗಿರುವ ಆರೋಪದ ಮೇಲೆ ಚನ್ನಪಟ್ಟಣ ಗ್ರಾಮಾಂತರ ಸಿಪಿಐ ಗೋಪಿನಾಥ್ ಅವರನ್ನು ಅಮಾನತು ಮಾಡಬೇಕು. ಬೇರೊಬ್ಬ ತನಿಖಾಧಿಕಾರಿಯನ್ನು ನೇಮಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ವಿ.ಪಿ, ರಮೇಶ್‌, ಕಾರ್ಯದರ್ಶಿ ಎಸ್‌. ನಾಗರಾಜು, ಖಜಾಂಚಿ ನಿರಂಜನ್‌, ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ತಿಮ್ಮೇಗೌಡ, ಸದಸ್ಯರಾದ ಶಿವಕುಮಾರ್, ಜೈಪಾಲ್‌, ಮಂಜೇಶ್‌ ಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.