ADVERTISEMENT

ತಾಪಮಾನ ಹೆಚ್ಚಳ: ಪ್ರಾಕೃತಿಕ ವಿಕೋಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 7:14 IST
Last Updated 1 ಮಾರ್ಚ್ 2017, 7:14 IST
ಕನಕಪುರ ತಾಲ್ಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ನಡೆದ ಚಿಣ್ಣರ ವನದರ್ಶನ ಕಾರ್ಯಕ್ರಮದಲ್ಲಿ ಚಿಣ್ಣರು ಅರಣ್ಯಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು
ಕನಕಪುರ ತಾಲ್ಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ನಡೆದ ಚಿಣ್ಣರ ವನದರ್ಶನ ಕಾರ್ಯಕ್ರಮದಲ್ಲಿ ಚಿಣ್ಣರು ಅರಣ್ಯಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು   

ಕನಕಪುರ:  ‘ಪ್ರಕೃತಿಯಲ್ಲಿ ಸಕಾಲಕ್ಕೆ ಮಳೆಯಾಗಿ ಭೂಮಿ ಸಂತೃಪ್ತವಾಗಲು ಸಮೃದ್ಧವಾಗಿ ಮರಗಿಡಗಳನ್ನು ನಾವು ಬೆಳೆಸಬೇಕಿದೆ’ ಎಂದು ಕಾವೇರಿ ವನ್ಯಜೀವಿ ವಿಭಾಗದ ಸಂಗಮ ವಲಯ ಅರಣ್ಯಾಧಿಕಾರಿ ಶಿವರಾಮ್‌ ತಿಳಿಸಿದರು.

ತಾಲ್ಲೂಕಿನ ಸಂಗಮ ವನ್ಯಜೀವಿ ವಲಯದ ವತಿಯಿಂದ ಮುತ್ತತ್ತಿ ಸಮೀಪದ ಭೀಮೇಶ್ವರಿ ಪ್ರಕೃತಿ ಶಿಬಿರದಲ್ಲಿ ಉಯ್ಯಂಬಳ್ಳಿ ಪ್ರೌಢಶಾಲೆಯ 9 ನೇ ತರಗತಿ ಮಕ್ಕಳಿಗಾಗಿ ಸೋಮವಾರ ಆಯೋಜಿಸಿದ್ದ 2 ದಿನಗಳ ಚಿಣ್ಣರ ವನದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿಯಲ್ಲಿ ಹಸಿರು ಹೆಚ್ಚಾಗಿರುವ ಕಡೆಗೆ ಉತ್ತಮ ಮಳೆಯಾಗುತ್ತಿದೆ, ಇದು ವೈಜ್ಞಾನಿಕವಾಗಿಯೂ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬೇಕಾದರೆ ಕಾಡು, ಅರಣ್ಯವನ್ನು ಉಳಿಸಬೇಕು, ಗ್ರಾಮಗಳಲ್ಲೂ ರೈತರು ತಮ್ಮ ಜಮೀನುಗಳಲ್ಲೂ ಮರಗಳನ್ನು ಬೆಳೆಸಬೇಕೆಂದು ಹೇಳಿದರು.

ಉಪ ವಲಯ ಅರಣ್ಯಾಧಿಕಾರಿ ರವಿ ಮಾತನಾಡಿ ಭೂಮಿಯ ಮೇಲೆ ತಾಪಮಾನ ಹೆಚ್ಚಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಲಿದೆ, ಪ್ರಕೃತಿಯ ಅಸಮತೋಲನದಿಂದ ಹೆಚ್ಚಿನ ಗಂಡಾಂತರವಾಗಲಿದ್ದು ಈಗಲೇ ಜಾಗೃತಿ ಅಗತ್ಯ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ನಾಗೇಶ್‌ ಪವರ್‌ ಪಾಯಿಂಟ್‌ ಮೂಲಕ ತರಗತಿಗಳಲ್ಲಿ ಮಾಹಿತಿ ನೀಡಿದರು.

ಸಾಕ್ಷ್ಯ ಚಿತ್ರದ ಪ್ರದರ್ಶನ ನೀಡಿ ಪ್ರಾಣಿ ಹಾಗೂ ಕಾಡಿನ ಉಪಯೋಗ ಅವುಗಳ ಮಹತ್ವ, ಸಂರಕ್ಷಣೆ ಅವಶ್ಯಕತೆ, ಅವುಗಳ ಹೊಣೆ ಪ್ರಾಣಿ ಮತ್ತು ಮಾನವ ಸಂಘರ್ಷದ ಬಗ್ಗೆ ತಿಳಿಸಿ ಕೊಟ್ಟರು. ಅರಣ್ಯ ರಕ್ಷಕರಾದ ನಿಂಗಪ್ಪ ಕಾರ್ನಾಳ್, ಸಂದೀಪ್ ,ವಿಶ್ವಾನಾಥ್, ಉಯ್ಯಂಬಳ್ಳಿ ಶಾಲೆಯ ಶಿಕ್ಷಕರಾದ ಅಂಬುಜಾ, ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.