ಕನಕಪುರ: ‘ನೂರಾರು ವರ್ಷಗಳ ಇತಿಹಾಸವಿರುವ ದೇಗುಲ ಮಠದ ಜವಾಬ್ದಾರಿ ಹೆಚ್ಚಾಗಿದೆ. ಅದಕ್ಕೆಸೂಕ್ತ ವ್ಯಕ್ತಿಗಾಗಿ ಹುಡುಕಾಟದಲ್ಲಿದ್ದಾಗ ಮೈಸೂರು ಜೆ.ಎಸ್.ಎಸ್.ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಕೆ.ಜಿ ಶಶಿಕುಮಾರ್ ಅವರನ್ನು ಸುತ್ತೂರು ಶ್ರೀಗಳ ನಿರ್ದೇಶನದಂತೆ ಆಯ್ಕೆ ಮಾಡಲಾಗಿದೆ ಎಂದು ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣಸ್ವಾಮಿ ತಿಳಿಸಿದರು.
ನಗರದ ದೇಗುಲಮಠದಲ್ಲಿ ಗುರುವಾರ ಏರ್ಪಡಿಸಿದ್ದ ಉತ್ತರಾಧಿಕಾರಿ (ವಟು) ನೇಮಕ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗೈಕ್ಯ ಮುಮ್ಮಡಿ ಮಹಾಲಿಂಗಸ್ವಾಮೀಜಿ ಮಠದ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದರು. ಆದರೆ, ಅವರ ಅಕಾಲಿಕ ಮರಣದಿಂದ ಮಠಕ್ಕೆ ಆಡಳಿತಾತ್ಮಕವಾಗಿ ಹಿನ್ನಡೆಯಾಗಿತ್ತು. ಮಠಕ್ಕೆ ಸೂಕ್ತ ವ್ಯಕ್ತಿ ಬೇಕೆಂದು ಪರಿಶೀಲನೆ ನಡೆಸುತ್ತಿದ್ದಾಗ ಶಶಿಕುಮಾರ ಸೂಕ್ತರಾಗಿ ಕಂಡು ಬಂದರು ಎಂದು ಹೇಳಿದರು.
ಅವರ ತಂದೆ – ತಾಯಿಯೊಂದಿಗೆ ಮಾತುಕತೆ ನಡೆಸಿದಾಗ ಪೂರ್ಣ ಮನಸ್ಸಿನಿಂದ ದೇಗುಲಮಠದ ಪೀಠಾಧಿಕಾರಿಯನ್ನಾಗಿ ಮಾಡಲು ಒಪ್ಪಿದ್ದಾರೆ ಎಂದರು.
ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಕೆ.ಜಿ.ಶಶಿಕುಮಾರ್ ಮಾತನಾಡಿ, ದೇಗುಲ ಮಠದ ಅಭಿವೃದ್ಧಿಗೆ ಹಿರಿಯ ಶ್ರೀಗಳ ಸಹಕಾರದೊಂದಿಗೆ ಉತ್ತಮವಾಗಿ ನಿರ್ವಹಿಸುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.