ಮಳೂರು (ಚನ್ನಪಟ್ಟಣ): ಸರ್ಕಾರಿ ಜಾಗವನ್ನು ಖಾಸಗಿ ಟ್ರಸ್ಟ್ ಗೆ ನೀಡಿರುವ ಕ್ರಮ ಖಂಡಿಸಿ ತಾಲ್ಲೂಕಿನ ಬೈರಾಪಟ್ಟಣ ಗ್ರಾಮಸ್ಥರು ಮಳೂರು ಗ್ರಾಮ ಪಂಚಾ ಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ರೈಲ್ವೆ ಗೇಟ್ ಬಳಿ ಇರುವ ಗ್ರಾಮ ಪಂಚಾಯಿತಿಗೆ ಸೇರಿದ 40–60 ಅಳತೆಯ ಜಾಗ ಈ ಹಿಂದೆ ರಾಮ ಮಂದಿರ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಈಗ ಈ ಜಾಗವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಗೆ ಗ್ರಾಮ ಪಂಚಾಯಿತಿ ವತಿಯಿಂದ ಮಂಜೂರು ಮಾಡಿ ಕೊಡಲಾಗಿದೆ. ಇದನ್ನು ರದ್ದು ಮಾಡ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಈ ಜಾಗವನ್ನು ಖಾಸಗಿ ಟ್ರಸ್ಟ್ ಗೆ ವರ್ಗಾಯಿಸುವ ಹುನ್ನಾರ ನಡೆಸಿ ದ್ದಾರೆ. ಆ ಜಾಗವನ್ನು ಖಾಸಗಿ ಅವರಿಗೆ ನೀಡಲು ಒಪ್ಪಿಗೆ ಸೂಚಿಸಿ ಕಡತ ಸಿದ್ಧಪಡಿ ಸಲಾಗಿದೆ. ಇದಕ್ಕೆ ಗ್ರಾಮಸ್ಥರ ವಿರೋಧವಿದ್ದರೂ ಖಾತೆ ಮಾಡಿ ಕೊಡಲು, ಕಟ್ಟಡ ಕಟ್ಟಲು ಗ್ರಾ.ಪಂ. ಅನುಮತಿ ನೀಡಿದೆ. ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
‘ಈ ಜಾಗ ಖಾಸಗಿಯವರಿಗೆ ನೀಡಬಾರದು ಎಂದು ಈ ಹಿಂದೆಯೇ ಗ್ರಾಮಸ್ಥರು ತಕರಾರು ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ಇದನ್ನು ಪರಿಗಣಿಸಿಲ್ಲ. ರಾಮಮಂದಿರ ನಿರ್ಮಾಣ ಕ್ಕಲ್ಲದೆ ಈ ಜಾಗದಲ್ಲಿ ಬೇರೆ ಯಾವ ಕಟ್ಟಡವನ್ನೂ ಕಟ್ಟಲು ಬಿಡುವುದಿಲ್ಲ.
ಒಂದು ವೇಳೆ ಬೇರೆ ಕಟ್ಟಡ ನಿರ್ಮಾಣ ಮಾಡಲು ಮುಂದಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ’ಎಂದು ಪ್ರತಿಭಟನಾಕಾರರು ಎಚ್ಚರಿಸಿ ದರು. ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಪ್ರತಿಭಟನಾಕಾರರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.