ADVERTISEMENT

ಮಾತೆ ಮಹಾದೇವಿ, ಪಾಟೀಲ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 10:09 IST
Last Updated 15 ಸೆಪ್ಟೆಂಬರ್ 2017, 10:09 IST
ರಾಮನಗರದಲ್ಲಿ ಗುರುವಾರ ವೀರಶೈವ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ರಾಮನಗರದಲ್ಲಿ ಗುರುವಾರ ವೀರಶೈವ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ರಾಮನಗರ: ಮಾತೆ ಮಹಾದೇವಿ ಹಾಗೂ ನೀರಾವರಿ ಸಚಿವ ಎಂ.ಬಿ. ಪಾಟೀಲ ಅವರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಬಗ್ಗೆ ಸಲ್ಲದ ಹೇಳಿಕೆ ನೀಡಿ, ಲಿಂಗಾಯತ ವೀರಶೈವ ಸಮುದಾಯದಲ್ಲಿ ಬಿರುಕು ಮೂಡಿಸುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಮಹಾಸಭಾ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಐಜೂರು ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಸಚಿವರು ಹಾಗೂ ಮಾತೆ ಮಹಾದೇವಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ವೀರಶೈವ ಲಿಂಗಾಯತ ಸಮುದಾಯವು ಒಂದೇ ಕುಟುಂಬದಂತೆ ಇದ್ದು, ಒಗ್ಗಟ್ಟಿನಿಂದ ಬಾಳ್ವೆ ಮಾಡುತ್ತಿದ್ದೇವೆ. ಹೀಗಿರುವಾಗ ಪ್ರತ್ಯೇಕ ಧರ್ಮದ ಆಮಿಷ ಒಡ್ಡಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆದಿರುವುದು ಸರಿಯಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಶಿವಕುಮಾರ ಶ್ರೀಗಳು ನಡೆದಾಡುವ ದೇವರು ಎಂದೇ ಖ್ಯಾತಿಯಾದವರು. ಅವರು ಎಲ್ಲ ಜಾತಿ–ಧರ್ಮಕ್ಕೂ ಆದರ್ಶಪ್ರಾಯರು. ಅಂತಹವರನ್ನು ಜಾತಿಯ ವಿಚಾರಕ್ಕೆ ಅನವಶ್ಯಕವಾಗಿ ಎಳೆತರಲಾಯಿತು. ತಾನು ಯಾವುದೇ ಎಂದು ಜಾತಿಯ ಪರ ಹೇಳಿಕೆ ನೀಡಿಲ್ಲ ಎಂದು ಶ್ರೀಗಳೇ ಸ್ಪಷ್ಟನೆ ನೀಡಿದ್ದರೂ ಅದನ್ನು ಒಪ್ಪಿಕೊಳ್ಳದೇ ಅವರಿಗೆ ಅಗೌರವ ಆಗುವ ರೀತಿಯಲ್ಲಿ ಕೆಲವರು ನಡೆದುಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಶ್ರೀಗಳ ಹೆಸರಿಗೆ ಕಳಂಕ ತರುವಂತೆ ಮಾತನಾಡಿರುವ ಈ ಇಬ್ಬರೂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಪಾಟೀಲರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಮುಖಂಡರಾದ ದೊಡ್ಡಗಂಗವಾಡಿ ಶಿವಪ್ರಸಾದ್, ಸಿ.ನಾಗರಾಜ, ತಾಲ್ಲೂಕು ಪಂಚಾಯಿತಿ ಸದಸ್ಯ ಭದ್ರಪ್ಪ, ಶಿವಕುಮಾರ್, ಎಸ್‌.ಆರ್. ನಾಗರಾಜು, ರುದ್ರದೇವರು, ವಿಭೂತಿಕೆರೆ ಶಿವಲಿಂಗಯ್ಯ, ಜಗದೀಶ್‌, ಕೆ.ಪಿ. ರೇಣುಕಾಪ್ರಸಾದ್‌, ಉಮೇಶ್‌, ಲೋಕೇಶ್‌, ಶಿವಾನಂದ, ಶಿವಲಿಂಗಪ್ರಸಾದ್, ಯತೀಶ್, ಮರಿಸ್ವಾಮಿ, ರೇವಣ್ಣ, ಗುರುಲಿಂಗಯ್ಯ, ವೀರಶೈವ ಯುವಕ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.