ADVERTISEMENT

‘ರಸ್ತೆಗೆ ಜಾಗ ಸಂತ್ರಸ್ತರಿಗೂ ಪರಿಹಾರ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:38 IST
Last Updated 24 ಮೇ 2017, 10:38 IST

ಕನಕಪುರ: ‘ರಾಜ್ಯದ ಉದ್ದಗಲಕ್ಕೂ ಎಲ್ಲೂ ರಸ್ತೆ ವಿಸ್ತರಣೆ ವೇಳೆ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಬದಲಿ ನಿವೇಶನವಾಗಲಿ ಪರಿಹಾರದ ಹಣವಾಗಿಲ್ಲ ನೀಡಿಲ್ಲ. ನಮ್ಮೂರಿನಲ್ಲಿ ಕೊಡಿಸಲೇಬೇಕೆಂಬ ಕಾರಣಕ್ಕೆ ಪರಿಹಾರ  ಪರಿಶ್ರಮದಿಂದ ಕೊಡಿಸಿದ್ದೇವೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನಗರದ ನಗರಸಭೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಎಂ.ಜಿ.ರಸ್ತೆ ಅಗಲ ಹೆಚ್ಚಿಸುವ ವೇಳೆ ಜಾಗವನ್ನು ಕಳೆದುಕೊಂಡವರಿಗೆ ಭೂ ಪರಿಹಾರದ ಹಣ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘2008ರಲ್ಲಿ ಈ ರಸ್ತೆಯನ್ನು ವಿಸ್ತರಿಸಲಾಯಿತು. ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇದಕ್ಕಾಗಿ ಒಟ್ಟು ₹10 ಕೋಟಿ ಮಂಜೂರು ಮಾಡಿ ₹3 ಕೋಟಿ ಬಿಡುಗಡೆ ಮಾಡಿದ್ದರು. ರಸ್ತೆ ಬದಿಯ ಎರಡು ಕಡೆಯ ನಿವೇಶನ ಮತ್ತು ಕಟ್ಟಡಗಳನ್ನು ತೆರವುಗೊಳಿಸಿ ಎರಡು ಪಥದ ರಸ್ತೆಯನ್ನು ನಿರ್ಮಿಸಲಾಗಿತ್ತು ಎಂದರು.

ADVERTISEMENT

2009–10ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮಾಡಿದಾಗ ಲೋಕೋಪಯೋಗಿ ಇಲಾಖೆಯವರು ನಿಗದಿತ ಸಮಯದಲ್ಲಿ ಹಣ ಬಿಡುಗಡೆ ಮಾಡದೆ ಪ್ರಸ್ತಾವನೆಯು 2011ರಲ್ಲಿ ವಜಾಗೊಳಿಸಲಾಯಿತು. 2013ರಲ್ಲಿ 1,46,782 ಚದರ ಅಡಿ ನಿವೇಶನ ಮತ್ತು ಕಟ್ಟಡ  ಭೂ ಸ್ವಾಧೀನ ಪಡಿಸಿಕೊಂಡು ₹14,12,76,709 ಬಿಡುಗಡೆ ಮಾಡಲಾಯಿತು ಎಂದರು.

ಭೂ ಸ್ವಾಧೀನ ಪ್ರಕ್ರಿಯೆಯು ವಿಳಂಬವಾದ ಕಾರಣ ಮೊದಲು ಚದರ ಅಡಿಗೆ ₹574 ನೀಡಿದ್ದು ಈಗ ₹1148 ಕೊಡಲಾಗುತ್ತಿದೆ ಎಂದರು. ಜಾಗ ಕಳೆದುಕೊಂಡ ಸಂತ್ರಸ್ತರ ಪಟ್ಟಿಯಲ್ಲಿ ಸರ್ಕಾರಿ ಶಾಲೆ, ತಾಲ್ಲೂಕು ಕಚೇರಿ ಮತ್ತಿತರ ಸರ್ಕಾರಿ ಸ್ವಾಮ್ಯದ ಆಸ್ತಿ ಇದೆ. ಆ ಹಣವನ್ನು ಸಂಬಂಧಪಟ್ಟ ಇಲಾಖೆಯ ಹೆಸರಿಗೆ ನೀಡಲಾಗಿದೆ. ಬದಲಿ ನಿವೇಶನ ನೀಡುವ ವಿಚಾರದಲ್ಲಿ ಕೆಲವು ವ್ಯಕ್ತಿಗಳು ಉದ್ದೇಶ ಪೂರ್ವಕವಾಗಿ ಕೋರ್ಟ್‌ ಕಚೇರಿಯೆಂದು ತೊಂದರೆ ನೀಡಿದರು. ಆದರೂ ಕೊಟ್ಟ ಮಾತಿನಂತೆ ನಡೆದುಕೊಂಡಿ ದ್ದೇವೆ ಎಂದು ತಿಳಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪಿ.ಡಬ್ಲ್ಯೂ.ಡಿ. ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ₹55 ಕೋಟಿ ಅಗಲ ಹೆಚ್ಚಳದ ಅಂದಾಜುವೆಚ್ಚ ಮಾಡಿ ಪತ್ರಿಕೆಗೆ ನೀಡಿದ ಜಾಹಿರಾತು ಹಣ ನೀಡಿರಲಿಲ್ಲ. ನಾವು  ಪ್ರಾಮಾಣಿಕವಾಗಿ ದುಡಿದಿದ್ದೇವೆ, ಅತ್ಮಸಾಕ್ಷಿ ಒಪ್ಪುವಂತೆ ನಡೆದುಕೊಂಡಿದ್ದೇವೆ’ ಎಂದರು. ಬೆಂಗಳೂರು ರಸ್ತೆ ಸೇರಿದಂತೆ ದೇಗುಲಮಠ, ಮಳಗಾಳು ಬಳಿ ಒಟ್ಟು 4 ಸೇತುವೆ ನಿರ್ಮಾಣವಾಗುತ್ತಿವೆ. 

ನಾರಾಯಣಪ್ಪನ ಕೆರೆ ಅಭಿವೃದ್ಧಿ ಮಾದರಿಯಲ್ಲೇ ಪೇಟೆಕೆರೆ  ₹1.5 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾದ ಪಾರ್ಕ್‌ ನಿರ್ಮಾಣದೊಂದಿಗೆ ಅಭಿವೃದ್ಧಿ ಮಾಡಲಾಗುವುದು ಎಂದರು.

ಸ್ಮರಣೆ:  ದೇಗುಲಮಠದ ಕಿರಿಯ ಶ್ರೀ ಮುಮ್ಮಡಿ ಮಹಾಲಿಂಗಸ್ವಾಮಿ ನಿಧನಕ್ಕೆ ಸಭೆಯಲ್ಲಿ ಮೌನಾಚರಣೆ ಮಾಡಲಾಯಿತು. ಲಿಂಗೈಕ್ಯ ಮುಮ್ಮಡಿ ಮಹಾಲಿಂಗಸ್ವಾಮಿ ಅವರ ಆರಾಧನೆ ಯನ್ನು  ಜೂನ್‌ 18 ರಂದು ಮಠದಲ್ಲಿ ನೆರವೇರಿಸಲಾಗುವುದು.   ಎಂದರು. ದೇಗುಲಮಠದ ಹಿರಿಯಶ್ರೀ ಮುಮ್ಮಡಿ ನಿರ್ವಾಣಸ್ವಾಮಿ ಫಲಾನುಭ ವಿಗಳಿಗೆ ಚೆಕ್‌ ವಿತರಣೆ ಮಾಡಿ ಆಶೀರ್ವಚನ ನೀಡಿದರು.

ಸಂಸದ ಡಿ.ಕೆ.ಸುರೇಶ್‌ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಎಸ್.ರವಿ, ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಉಪಾಧ್ಯಕ್ಷ ಕೆ.ಜಗನ್ನಾಥ್‌, ಪೌರಾಯುಕ್ತ ಡಿ.ರಮೇಶ್‌, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.