ADVERTISEMENT

ವ್ಯಂಗ್ಯಚಿತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರುಹು

​ಪ್ರಜಾವಾಣಿ ವಾರ್ತೆ
Published 6 ಮೇ 2017, 8:37 IST
Last Updated 6 ಮೇ 2017, 8:37 IST
ಚನ್ನಪಟ್ಟಣದಲ್ಲಿ ವಿಶ್ವ ವ್ಯಂಗ್ಯಚಿತ್ರಗಾರರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವ್ಯಂಗ್ಯಚಿತ್ರಗಾರ ಅಕ್ಕೂರು ರಮೇಶ್ ಅವರನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣದಲ್ಲಿ ವಿಶ್ವ ವ್ಯಂಗ್ಯಚಿತ್ರಗಾರರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವ್ಯಂಗ್ಯಚಿತ್ರಗಾರ ಅಕ್ಕೂರು ರಮೇಶ್ ಅವರನ್ನು ಸನ್ಮಾನಿಸಲಾಯಿತು   

ಚನ್ನಪಟ್ಟಣ: ವ್ಯಂಗ್ಯಚಿತ್ರಗಳು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರುಹುಗಳಾಗಿವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ನರೇಂದ್ರ ಕಾಂಪ್ಲೆಕ್ಸ್‌ನಲ್ಲಿ ವಿಶ್ವ ವ್ಯಂಗ್ಯಚಿತ್ರಗಾರರ ದಿನಾಚರಣೆ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವ್ಯಂಗ್ಯಚಿತ್ರಗಾರ ಅಕ್ಕೂರು ರಮೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದ ಆರೋಗ್ಯಕರ ವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಜನರ ಬಂಡಾಯ ಪ್ರವೃತ್ತಿ, ಸಮಾಜದ ಅಂಕು ಡೊಂಕು  ಪ್ರತಿನಿಧಿಸುತ್ತವೆ.  ಕಾಲ ಮತ್ತು  ಪ್ರದೇಶದ ಗೊಡವೆ ಇಲ್ಲದೆ ಈ ವ್ಯಂಗ್ಯ ಚಿತ್ರಗಳು ಸಮಾಜದ ಪ್ರತಿಬಿಂಬಗಳಾಗಿ ಎಲ್ಲರ ಗಮನ ಸೆಳೆಯುತ್ತವೆ. ಇಂತಹ ಕಲಾವಿದರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್ ಮಾತನಾಡಿ, ಕೇವಲ ರೇಖೆಗಳ ಮೂಲಕ ಸಮಾಜದ ಅಂಕುಡೊಂಕು ವಿಡಂಬನೆ ಮಾಡುವ ಶಕ್ತಿ ಒಬ್ಬ ವ್ಯಂಗ್ಯಚಿತ್ರಕಾರನಿಗೆ ಮಾತ್ರ ಇದೆ.

ವ್ಯಂಗ್ಯಚಿತ್ರಕಾರರ ಸಂಖ್ಯೆ ಬಹಳ ಕಡಿಮೆ ಇದೆ. ಈ ಕಲೆಯನ್ನು ಹೆಚ್ಚು ಕಲಿಸಿಕೊಟ್ಟು ಜಾಗೃತಿ ಮೂಡಿಸುವ ಕೆಲಸಕ್ಕೆ ಹಿರಿಯ ವ್ಯಂಗ್ಯ ಚಿತ್ರಕಾರರು ಮುಂದಾಗಬೇಕು ಎಂದು ಅವರು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಕೂರು ರಮೇಶ್, ವ್ಯಂಗ್ಯಚಿತ್ರ ನೋಡಲು ಮನರಂಜನೆ ನೀಡುವ ಕಲೆಯಾದರೂ ಅದರಲ್ಲಿ ಸಾಮಾಜಿಕ ವಿಡಂಬನೆ ಅಡಗಿರುತ್ತದೆ. ಅಂತಹ ಕಲೆಯನ್ನು ನಿರಂತರ ಪ್ರಯತ್ನ ಹಾಗೂ ಶ್ರದ್ಧೆಯಿಂದ ಮಾತ್ರ ಕಲಿಯಬೇಕು ಎಂದರು. 

ಸಮಾಜ ಸೇವಕ ಅಕ್ರಂಖಾನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಟಿ.ನಾಗೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಆರ್.ಶಂಕರ್,  ಎಲೇಕೇರಿ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT