ಮಾಗಡಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸೂಕ್ತ ಸಂಚಾರ ಸಾರಿಗೆ ವ್ಯವಸ್ಥೆಗೆ ಸೂಕ್ತ ಕ್ರಮಕೈಗೊಂಡು ಸಮಯಕ್ಕೆ ಸರಿಯಾಗಿ ರಾಜ್ಯರಸ್ತೆ ಸಾರಿಗೆ ಬಸ್ ಸಂಚರಿಸುವಂತೆ ತುರ್ತುಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಸರ್ಕಾರಿ ಬಸ್ ಸಂಚಾರದ ಅನಾನುಕೂಲದ ಬಗ್ಗೆ ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪುರಸಭೆ ಆವರಣದಲ್ಲಿ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಾಗಡಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ಗಳು ಹೊರಡುವ ಬಗ್ಗೆ ಖಚಿತ ಮಾಹಿತಿ ಬರೆಸಬೇಕು. ಕನಿಷ್ಠ ಅರ್ಧ ಗಂಟೆಗೆ ಒಂದರಂತೆ ಸಂಜೆ ಮತ್ತು ಮುಂಜಾನೆ ಮಾಗಡಿಯಿಂದ ಬೆಂಗಳೂ ರಿಗೆ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು.
ರಾತ್ರಿ 8 ಗಂಟೆಯ ನಂತರ ಬೆಂಗಳೂರಿನಿಂದ ಮಾಗಡಿಗೆ ಬರುವ ಸರ್ಕಾರಿ ಬಸ್ಗಳನ್ನು ನೇಕಾರರ ಅನು ಕೂಲಕ್ಕಾಗಿ ಮಹಾದ್ವಾರದಿಂದ ತಿರುಮಲೆಗೆ ಹೋಗಿ ಎಸ್ಇಎಸ್ ವೃತ್ತದಿಂದ ಹೊಸಪೇಟೆ ವೃತ್ತದ ಮೂಲಕ ಬಸ್ ನಿಲ್ದಾಣ ತಲುಪುವಂತೆ ಬಸ್ ಚಲಿಸಬೇಕು, ಮಾಗಡಿಯಿಂದ ಬೆಂಗಳೂರಿಗೆ ಹೋಗುವ ಬಸ್ಗಳನ್ನು ಟೋಲ್ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಹಿಂತಿರುಗಿಸಿ ಮಾಗಡಿ ಯತ್ತ ಬರುವುದು ಸರಿಯಲ್ಲ. ಮಾಗಡಿ ಯಿಂದ ಕಲಾಸಿಪಾಳ್ಯಂ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯಬೇಕು ಎಂದರು.
ಪ್ರಯಾಣಿಕರು ಸಹ ರಸ್ತೆ ಸಾರಿಗೆ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಾಗಡಿ ಸರ್ಕಾರಿ ಬಸ್ ಡಿಪೋ ಮ್ಯಾನೇಜರ್ ಎನ್.ವಿನಯ್ ಮಾತನಾಡಿ, ಸರ್ಕಾರಿ ಬಸ್ಗಳು ಸಂಚರಿಸುತ್ತಿರುವ ಮಾರ್ಗಗಳಲ್ಲಿ ಆಪೆ ಆಟೋಗಳು ಅನಧಿಕೃತವಾಗಿ ಸಂಚರಿಸುತ್ತಿವೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್ಟಿಒ ಮತ್ತು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದರು. ಪುರಸಭೆ ಅಧ್ಯಕ್ಷೆ ಹೊಂಬಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರಘು, ಸದಸ್ಯರಾದ ಶಿವಶಂಕರ್, ಮಂಡಿಗುರು, ಬಸವರಾಜು, ರಿಯಾಜ್, ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಶಂಕರ್, ಪ್ರಯಾಣಿಕ, ಮೊದಲಾರಯ್ಯನ ಪಾಳ್ಯದ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.