ADVERTISEMENT

ಸಮಾಜಕ್ಕೆ ಬೆಳಕು ನೀಡಿದರೆ ಜೀವನ ಸಾರ್ಥಕ:ಪುಟ್ಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:51 IST
Last Updated 8 ಫೆಬ್ರುವರಿ 2017, 8:51 IST

ಚನ್ನಪಟ್ಟಣ: ಸಮಾಜವನ್ನು ಬೆಳಕಿನೆಡೆಗೆ ಕೊಂಡೊಯ್ದಾಗ ಮಾತ್ರ ಪ್ರತಿಯೊಬ್ಬರ ಜೀವನ ಸಾರ್ಥಕವಾಗುತ್ತದೆ ಎಂದು  ಮುಖ್ಯ ಶಿಕ್ಷಕ ಕೆ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಗಚಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಸಾಪ ತಾಲ್ಲೂಕು ಘಟಕವು ಮಂಗಳವಾರ ಹಮ್ಮಿಕೊಂಡಿದ್ದ ಜಿ.ಎಸ್.ಶಿವರುದ್ರಪ್ಪ ಅವರ 92ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಭಾಷಾಜ್ಞಾನವನ್ನು ರೂಢಿಸಿಕೊಳ್ಳಬೇಕು. ಗುರು ಹಿರಿಯರ ಆಶೀರ್ವಾದ, ಹಾರೈಕೆಯಿಂದ ಒಳ್ಳೆಯ ಹೆಸರನ್ನು ತರಲು ಸಂಕಲ್ಪ ಮಾಡಬೇಕು. ಇದರಿಂದ ಉತ್ತಮ ಪ್ರಜೆಯಾಗಲು ಸಾಧ್ಯ. ಶಿವರುದ್ರಪ್ಪ ಬರೆದ ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಸಮಾಜದ ಉದ್ಧಾರಕ್ಕೆ ದುಡಿಯಬೇಕು ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ಮಾತನಾಡಿ, ಕನ್ನಡ ನಾಡಿಗೆ ವಿಶಿಷ್ಟ ಕೊಡುಗೆ ನೀಡಿ ಸಾಹಿತ್ಯವನ್ನು ಶ್ರೀಮಂತವಾಗಿಸಿದ ಕವಿಗಳಲ್ಲಿ ಜಿ.ಎಸ್.ಎಸ್. ಒಬ್ಬರು. ಇಂತಹ ಮೇರು ವ್ಯಕ್ತಿತ್ವವುಳ್ಳವರ ಸಾಹಿತ್ಯವನ್ನು ಓದಿ ತಿಳಿದುಕೊಳ್ಳಬೇಕು. ಕನ್ನಡ ಭಾಷೆ ಎಲ್ಲರಿಗೂ ಕಲಿಯಲು, ಕಲಿಸಲು ಸುಲಭವಾಗಿದ್ದು, ನಾಡನ್ನು ಕಟ್ಟುವಲ್ಲಿ ಕನ್ನಡಿಗರ ಪಾತ್ರ ಹಿರಿದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ಜೀವನವನ್ನು ವಿಕಾಸ ಮಾಡುವುದೇ ಶಿಕ್ಷಣದ ಗುರಿಯಾಗಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕು. ಶಿವರುದ್ರಪ್ಪ ಅನನ್ಯ ಕವಿಗಳಲ್ಲಿ ಒಬ್ಬರು ಎಂದರು.

ಕಸಾಪ ತಾಲ್ಲೂಕು ಘಟಕದ ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಸಾಹಿತಿ ಎಲೆಕೇರಿ ಡಿ.ರಾಜಶೇಖರ್, ರೈತ ಮುಖಂಡ ಶಿವಕುಮಾರ್, ಮಂಜುನಾಥ್, ಶಿಕ್ಷಕಿಯರಾದ ಶೋಭ, ಸುನಂದಬಾಯಿ, ಪ್ರಭಾವತಿ ಭಾಗವಹಿಸಿದ್ದರು. ಗಾಯಕರಾದ ಕೆ.ಎಚ್.ಕುಮಾರ್, ಮಾರುತಿಕುಮಾರ್ ಮತ್ತು ವಿದ್ಯಾರ್ಥಿಗಳು ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.