ರಾಮನಗರ: ನಗರದ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿನ ಹಂದಿ ಸಾಕಣೆ ಕೇಂದ್ರಗಳ ಮೇಲೆ ಶನಿವಾರ ನಗರಸಭೆಯ ಸಿಬ್ಬಂದಿ ದಾಳಿ ನಡೆಸಿ, ಅವುಗಳನ್ನು ತೆರವುಗೊಳಿಸಿದರು. ಅರ್ಕಾವತಿ ಬಡಾವಣೆ ಬಳಿ ಸಾಕಷ್ಟು ವರ್ಷಗಳಿಂದಲೂ ಇದ್ದ ಹಂದಿ ಸಾಕಣೆ ಕೇಂದ್ರದ ಮೇಲೆ ಅಧಿಕಾರಿಗಳ ತಂಡವು ದಾಳಿ ನಡೆಸಿತು.
ಇಲ್ಲಿ 150ಕ್ಕೂ ಹೆಚ್ಚು ಹಂದಿಗಳನ್ನು ಸಾಕಲಾಗುತ್ತಿತ್ತು. ಜೆಸಿಬಿ ಯಂತ್ರದ ಮೂಲಕ ಗೂಡುಗಳನ್ನು ತೆರವುಗೊಳಿಸಿದ ನಗರಸಭೆ ಸಿಬ್ಬಂದಿಯ ಜೊತೆ ಹಂದಿ ಸಾಕಾಣೆದಾರರು ವಾಗ್ವದ ನಡೆಸಿದರು. ಬಳಿಕ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆಯು ಮುಂದುವರಿಯಿತು.
ಒಟ್ಟು ಒಟ್ಟು 8 ಹಂದಿ ಗೂಡುಗಳನ್ನು ನಾಶಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂದಿ ಸಾಕಣೆ ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದರು. 2015ರಲ್ಲಿ ಲೋಕಾಯುಕ್ತ ಭಾಸ್ಕರ್ ರಾವ್ ನಗರಕ್ಕೆ ಭೇಟಿ ನೀಡಿದ್ದ ವೇಳೆ ಅರ್ಕಾವತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಂದಿ ಸಾಕಣೆಯಿಂದ ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆಗಳ ಕುರಿತು ದೂರು ನೀಡಿದ್ದರು. ಈ ಕುರಿತು ಕ್ರಮ ಜರುಗಿಸುವಂತೆ ಲೋಕಾಯುಕ್ತರು ನಗಸಭೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
‘ಹಂದಿ ಸಾಕಣೆ ಕೇಂದ್ರಗಳನ್ನು ತೆರವುಗೊಳಿಸುವಂತೆ ಈ ಹಿಂದೆ ಸಾಕಣೆದಾರರಿಗೆ ಹಲವು ನೋಟಿಸ್ ನೀಡಿದ್ದರೂ ಅವರು ತೆರವುಗೊಳಿಸಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಯಿತು. ಮತ್ತೆ ಇಲ್ಲಿ ಹಂದಿ ಸಾಕಣೆಗೆ ಮುಂದಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ಗಿರೀಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.