ADVERTISEMENT

18ರಿಂದ ಸುಗ್ಗನಹಳ್ಳಿ ದನಗಳ ಜಾತ್ರೆ

ಕಾಲುಬಾಯಿ ರೋಗಕ್ಕೆ ಲಸಿಕೆ ಕಡ್ಡಾಯ– ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 9:34 IST
Last Updated 31 ಜನವರಿ 2017, 9:34 IST
ಮಾಗಡಿ ತಾಲ್ಲೂಕಿನ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ ರಾಸುಗಳ ಜಾತ್ರೆಯ ಪೂರ್ವಸಿದ್ಧತಾ ಸಭೆ ಸೋಮವಾರ ಪುರಸಭೆ ಕಚೇರಿಯಲ್ಲಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾಗಡಿ ತಾಲ್ಲೂಕಿನ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ ರಾಸುಗಳ ಜಾತ್ರೆಯ ಪೂರ್ವಸಿದ್ಧತಾ ಸಭೆ ಸೋಮವಾರ ಪುರಸಭೆ ಕಚೇರಿಯಲ್ಲಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಿತು.   
ಮಾಗಡಿ: ತಾಲ್ಲೂಕಿನ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ  ಜಾತ್ರಾ ಮಹೋತ್ಸವದ ಅಂಗವಾಗಿ ಫೆ.18ರಿಂದ 23 ರವರೆಗೆ ದನಗಳ ಬೃಹತ್‌ ಜಾತ್ರೆ ನಡೆಯಲಿದೆ. 
 
ಜಾತ್ರೆಗೆ ಬರುವ ರೈತರಿಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಡಲು ಕಂದಾಯ, ಲೋಕೋಪಯೋಗಿ, ಪಶುಪಾಲನ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.
 
ಪುರಸಭೆಯಲ್ಲಿ ನಡೆದ ಸುಗ್ಗನಹಳ್ಳಿ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
 
ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಕಾಲುಬಾಯಿ ಜ್ವರದಿಂದ ರಾಸುಗಳಿಗೆ ತೊಂದರೆಯಾಗಬಹುದು. ಈ ರಾಸುಗಳ ಜಾತ್ರೆ ರದ್ದುಪಡಿಸುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿ ಡಾ.ನಾರಾಯಣ ಸ್ವಾಮಿ ತಿಳಿಸಿದರು.
 
ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ರಾಸುಗಳ ಜಾತ್ರೆ ಯಾವುದೇ ಕಾರಣಕ್ಕೂ ನಿಲ್ಲಿಸುವುದು ಬೇಡ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುನಾಥ, ಟಿಎಪಿಎಂಎಸ್‌ ಉಪಾಧ್ಯಕ್ಷ ಎಸ್‌.ಎ.ಕುಮಾರಯ್ಯ ಇತರರು ಒತ್ತಾಯಿಸಿದರು. ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ಜಾತ್ರೆಗೆ ಬರುವ ರಾಸುಗಳಿಗೆ  ಕಡ್ಡಾಯವಾಗಿ ಚುಚ್ಚುಮದ್ದು ಹಾಕಿ ಜಾತ್ರೆಯ ಒಳಗೆ ಸೇರಿಸಬೇಕು. ವೈದ್ಯರೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳು ಸಹಕರಿಸಿ, ರೈತರಿಗೆ ತಿಳಿವಳಿಕೆ ನೀಡಿ ಚುಚ್ಚುಮದ್ದು ನೀಡಬೇಕು. ರಾಸುಗಳ ಜಾತ್ರೆ ನಿಲ್ಲಿಸುವುದು ಬೇಡ ಎಂದರು.
 
ಮುಜರಾಯಿ ಇಲಾಖೆ ವತಿಯಿಂದ ದೇವಾಲಯದ ಸುತ್ತಲಿನ ಜಾತ್ರೆ ಬಯಲಿನಲ್ಲಿ ಇರುವ ನೀರಿನ ತೊಟ್ಟಿ ದುರಸ್ತಿ ಪಡಿಸಿ, ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್‌ ಎನ್‌.ಲಕ್ಷ್ಮೀಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.