ADVERTISEMENT

'ಧಾರ್ಮಿಕ ಆಚರಣೆಗಳಿಂದ ನೆಮ್ಮದಿ'

ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ವೈಕುಂಠ ಏಕಾದಶಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 11:15 IST
Last Updated 1 ಜನವರಿ 2018, 11:15 IST
ಕೈಲಾಂಚ ಗ್ರಾಮದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಪಾಂಡುರಂಗ ಮಾತನಾಡಿದರು.
ಕೈಲಾಂಚ ಗ್ರಾಮದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಪಾಂಡುರಂಗ ಮಾತನಾಡಿದರು.   

ರಾಮನಗರ : ಗ್ರಾಮೀಣ ಪ್ರದೇಶದ ಜನರು ಆಚರಿಸುವ ಧಾರ್ಮಿಕ ಆಚರಣೆಗಳು ಜನರ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತವೆ. ಜತೆಗೆ ಗ್ರಾಮದ ಜನರು ಒಗ್ಗಟ್ಟಿನಿಂದ ಕೂಡಿ ಸಹಬಾಳ್ವೆ ನಡೆಸಲು ಸಹಕಾರಿಯಾಗಿವೆ ಎಂದು ಹಿರಿಯ ಮುಖಂಡ ಮರಿಲಿಂಗೇಗೌಡ ಹೇಳಿದರು.

ಇಲ್ಲಿನ ಕೈಲಾಂಚ ಗ್ರಾಮದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ವಿಶೇಷ ಜನಪದ ಗೀತಾಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿ ಆಚರಿಸುವ ಹಬ್ಬ, ಹರಿದಿನಗಳ ಆಚರಣೆಯಲ್ಲಿ ಜನರು ಒಗ್ಗಟ್ಟಿನಿಂದ ಕಾರ್ಯಕ್ರಮಗಳಲ್ಲಿ ತೊಡಗುವುದರಿಂದ ಪರಸ್ಪರರಲ್ಲಿ ಭಿನ್ನಾಭಿಪ್ರಾಯ, ವೈಮನಸ್ಸು ದೂರವಾಗುವುದರ ಜತೆಗೆ ಎಲ್ಲರೂ ಒಟ್ಟಾಗಿ ಬದುಕು ನಡೆಸುವಂತೆ ಆಚರಣೆಗಳು ತಿಳಿಸಿಕೊಡುತ್ತವೆ ಎಂದರು.

ADVERTISEMENT

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಚ್.ಸಿ. ರಾಜಣ್ಣ ಮಾತನಾಡಿ ಹಿಂದೆ ಗ್ರಾಮಗಳ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ನಾಟಕ, ಭಜನೆ, ಜನಪದ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದವು. ಆದರೆ ಇಂದು ಜನರು ಆಧುನಿಕತೆಗೆ ಒಗ್ಗಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದಾರೆ. ಇದರಿಂದ ಮೂಲ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ತಿಳಿಸಿದರು.

ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಪಾಂಡುರಂಗ ಮಾತನಾಡಿ ಇಲ್ಲಿನ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಚೋಳರ ಕಾಲದ ಪುರಾತನ ದೇವಾಲಯವಾಗಿದೆ. ಪ್ರತಿ ವರ್ಷ ವೈಕುಂಠ ಏಕಾದಶಿಯಂದು ಹಲವು ವಿಶೇಷ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಕೆ ಶಿವಲಿಂಗಯ್ಯ, ಎಪಿಎಂಸಿ ನಿರ್ದೇಶಕ ದೇವುರಾವ್, ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ನಟ ರವೀಂದ್ರ, ಮುಖಂಡರಾದ ಸಬ್ಬಕೆರೆ ಶಿವಲಿಂಗಪ್ಪ, ಕೋಡಿಹಳ್ಳಿ ರಮೇಶ್, ರಮೇಶ್, ಅಜಯ್ ದೇವೇಗೌಡ, ವಾಸು, ಬೋರಯ್ಯ, ಶೋಭಾ, ಗೋಪಾಲನಾಯ್ಕ, ಶ್ರೀನಿವಾಸಮೂರ್ತಿ, ವರದರಾಜು, ಕರಿಯಪ್ಪ, ಗೋಪಿ, ರೇಣುಕಾಪ್ರಸಾದ್, ಬಾಬು, ಉಮೇಶ್, ಕುಮಾರ್, ಶ್ರೀಕಂಠು, ರೇಣುಕಾಮೂರ್ತಿ, ನಾಗರಾಜು, ರಾಜು, ಚಂದ್ರು, ದೇವರಾಜು, ಅಶ್ವಥ್‍ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.