ಚನ್ನಪಟ್ಟಣ: ರೋಗಿಗಳ ಅನುಕೂಲಕ್ಕಾಗಿ ಗುಣಮಟ್ಟದ ಔಷಧಿ ನೀಡಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಜನೌಷಧ ಮಳಿಗೆ ತೆರೆಯಲಾಗಿದ್ದು, ಶೇ50 ರಷ್ಟು ರಿಯಾಯಿತಿ ದರದಲ್ಲಿ ಔಷಧಿ ಸಿಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಂಸ್ಥೆ ವತಿಯಿಂದ ಆರಂಭವಾದ ಜನೌಷಧಿ ಮಳಿಗೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಉಚಿತವಾಗಿ ಔಷಧಿ ನೀಡಲಾಗುತ್ತದೆ. ಆದರೆ, ಉಚಿತವಾಗಿ ಸಿಗದ ಔಷಧಿಗಳು ಜನೌಷಧ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಶೋಕ್ ವೆಂಕೋಬರಾವ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಳಜಿ ಫಲವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತಿರುವ ಜನೌಷಧ ಮಳಿಗೆ ಬಡ ರೋಗಿಗಳಿಗೆ ವರದಾನವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಉಸ್ತುವಾರಿ ಸಿ.ಬೈರ, ಜಿಲ್ಲಾ ಮೇಲ್ವಿಚಾರಕ ವೆಂಕಟೇಶಮೂರ್ತಿ, ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಫಾರ್ಮಾಸಿಸ್ಟ್ ನಿಖಿತಾ, ಸುಧೀಂದ್ರಕುಮಾರ್, ಪ್ರದೀಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.