ADVERTISEMENT

ಅರಬಿಳಚಿ: ನಾಗಸಮುದ್ರ ಕೆರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:27 IST
Last Updated 15 ನವೆಂಬರ್ 2017, 10:27 IST
ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದ ನಾಗಸಮುದ್ರಕೆರೆಯಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಅಡಿಕೆ ತೋಟವನ್ನು ಮಂಗಳವಾರ ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಲಾಯಿತು.
ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದ ನಾಗಸಮುದ್ರಕೆರೆಯಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಅಡಿಕೆ ತೋಟವನ್ನು ಮಂಗಳವಾರ ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಲಾಯಿತು.   

ಹೊಳೆಹೊನ್ನೂರು: ಸಮೀಪದ ಅರಬಿಳಚಿ ಗ್ರಾಮದ ನಾಗಸಮುದ್ರಕೆರೆಯ ಒತ್ತುವರಿ ತೆರವು ಕಾರ್ಯವನ್ನು ಮಂಗಳವಾರ ಕೈಗೊಳ್ಳಲಾಯಿತು. ಸರ್ವೆ ನಂಬರ್‌ 255ರಲ್ಲಿ ಒಂಬತ್ತು ಎಕರೆ ಹನ್ನೆರಡು ಗುಂಟೆ ವಿಸ್ತಾರದ ಕೆರೆಯಲ್ಲಿ ಒತ್ತುವರಿ ಮಾಡಿ ಅಡಿಕೆ ತೋಟ ಬೆಳೆಸಲಾಗಿತ್ತು. ಕೆರೆಯ ಅಸ್ತಿತ್ವವೇ ಇಲ್ಲದಂತೆ ಒತ್ತುವರಿ ಮಾಡಲಾಗಿತ್ತು.

ಕಳೆದ ಏಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ತಾಲ್ಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು.

ಬಳಿಕ ಜಿಲ್ಲಾಧಿಕಾರಿ ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು. ಇದರ ಜೊತೆಯಲ್ಲೇ ಒತ್ತುವರಿದಾರರು ತಾತ್ಕಾಲಿಕವಾಗಿ ತೆರವು ಕಾರ್ಯವನ್ನು ಮುಂದೂಡಿ, ಫಸಲು ಕೊಯ್ಲಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದರು. ಬಳಿಕ ನಾಲ್ಕು ತಿಂಗಳ ಕಾಳ ತೆರವು ಕಾರ್ಯವನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ADVERTISEMENT

ಒತ್ತುವರಿದಾರರಿಗೆ ನೀಡಿದ್ದ ಗಡವು ಮುಗಿದಿದ್ದರಿಂದ ಪೊಲೀಸರ ರಕ್ಷಣೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಎರಡು ಹಿಟಾಚಿ ಮತ್ತು ಮೂರು ಜೆಸಿಬಿ ಯಂತ್ರ ಬಳಸಿ ಕೆರೆಯ ಸುತ್ತಲೂ ಕಂದಕ ನಿರ್ಮಿಸಿ, ಅಡಿಕೆ ಮರಗಳನ್ನು ಉರುಳಿಸಲಾಯಿತು. ತಹಶೀಲ್ದಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಡಿವೈಎಸ್‌ಪಿ, ಎಸ್‌.ಐ. ಅಣ್ಣಯ್ಯ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.