ಶಿವಮೊಗ್ಗ: ತಾಲ್ಲೂಕಿನ ಗೌಡನಕೆರೆ, ಹಾಯ್ಹೊಳೆ ಕೆರೆ ಹಾಗೂ ಬಾರೇಹಳ್ಳಕ್ಕೆ ನೀರು ತುಂಬಿಸುವ ತುಂಗಾ ಏತನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಮಂಗಳವಾರ ಮೂರು ಕೆರೆಗಳಿಗೆ ಪ್ರಾಯೋಗಿಕವಾಗಿ 112 ಕ್ಯುಸೆಕ್ ನೀರು ಹರಿಸಲಾಯಿತು.
ತುಂಗಾ ಏತನೀರಾವರಿ ಕಾಮಗಾರಿ ಅಮೃತ್ ಯೋಜನೆ ಅಡಿಯಲ್ಲಿ 2013ರಲ್ಲಿ ಆರಂಭವಾಗಿತ್ತು. ₹ 87.7 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕೆರೆಗಳಿಗೆ ಜೂನ್ನಿಂದ ಡಿಸೆಂಬರ್ವರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡಿರುವ ಕಾರಣ ಪರೀಕ್ಷಾರ್ಥವಾಗಿ ನೀರು ಹರಿಸಲಾಗಿದೆ. ಜಾನುವಾರಿಗೆ ಕುಡಿಯಲು ನೀರು ಮತ್ತು ಅಂತರ್ಜಲಮಟ್ಟ ಕಡಿಮೆಯಾಗಿರುವ ಕಾರಣ ಈಗ ಹರಿಸಲಾಗಿರುವ ನೀರು ಉಪಯೋಗವಾಗಲಿದೆ.
ಜ. 6ರಂದು ಸಿ.ಎಂ. ಸಿದ್ದರಾಮಯ್ಯ ಅವರು ಯೋಜನೆಯ ಉದ್ಘಾಟಿಸಲಿದ್ದಾರೆ. ಅಲ್ಲಿಯವರೆಗೂ ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲ ಎಂಜಿನಿಯರ್ ಎ.ವಿ.ವಿಜಯಕುಮಾರ್ ಮತ್ತು ಯೋಜನೆಯ ವ್ಯವಸ್ಥಾಪಕ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.
ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಹಾಗೂ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಮೀಸಲಿಟ್ಟು, ಉಳಿದ ನೀರನ್ನು ಜನವರಿ ನಂತರವೂ ತುಂಗಾ ಜಲಾಶಯದಿಂದ ಹರಿಸಲಾಗುತ್ತದೆ ಎಂದು ವಿವರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.