ADVERTISEMENT

ಜೀವಂತಿಕೆ ಕಳೆದುಕೊಂಡ ಸೀಬಿನಕೆರೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೂಳು ತುಂಬಿ ಹಾಳಾಗುತ್ತಿರುವ ಕೆರೆಗಳು

ಶಿವಾನಂದ ಕರ್ಕಿ
Published 12 ಮೇ 2017, 4:11 IST
Last Updated 12 ಮೇ 2017, 4:11 IST
ತೀರ್ಥಹಳ್ಳಿ: ಹೂಳು ತುಂಬಿದ ಮೈದಾನದಂತೆ ಕಾಣುವ ಈ ಪ್ರದೇಶವನ್ನು ಕೆರೆ ಎನ್ನುವುದಕ್ಕೆ ಯಾವುದೇ ಕುರುಹು ಇಲ್ಲ.  ದಂಡೆ ಮೇಲಿನ ಡಾಂಬರು ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪ್ಲಾಸ್ಟಿಕ್‌ ಕವರ್‌ನಲ್ಲಿ ತಂದ ಕಸ ಸುರಿಯುವ ಜಾಗವೂ ಇದೇ. ಸೀಬಿನ ಕೆರೆಯ ದುಃಸ್ಥಿತಿ ಇದು. 
 
ಕೆರೆಯಲ್ಲಿ ಹೂಳು ತುಂಬಿ, ಹುಲ್ಲು ಬೆಳೆದಿದೆ. ಅದನ್ನು ಮೇಯಲು ಹೋಗುವ ಜಾನುವಾರು ಹೂತುಹೋಗಿ, ಪ್ರಾಣ ಕಳೆದುಕೊಂಡಿವೆ. ಸ್ಥಳೀಯ ಆಡಳಿತ ಇಂದಿಗೂ ಹೂಳು ತೆಗೆಸಿಲ್ಲ. ಕೆರೆಯು ಸೊಳ್ಳೆ ಉತ್ಪಾದನಾ ಕೇಂದ್ರದಂತಾಗಿದೆ. 
 
ಪಟ್ಟಣದ ವ್ಯಾಪ್ತಿಯಲ್ಲಿ ನಾಲ್ಕು ಪ್ರಮುಖ ಕೆರೆಗಳಿದ್ದು, ಮುಸಾಫಿರ್‌ ಖಾನ್‌ಕೆರೆ, ಕೊರ್ಲುಕೆರೆ, ತಮ್ಮಡಿ ಕೆರೆ ಹಾಗೂ ಸೀಬಿನಕೆರೆ ಪರಿಸ್ಥಿತಿ ಒಂದೇ ರೀತಿ ಇದೆ. ಪ್ರಕೃತಿಪ್ರಿಯರು, ಸಂಘ ಸಂಸ್ಥೆಗಳು ವಿಶ್ವ ಪರಿಸರ ದಿನ ಕೆರೆಯ ಸುತ್ತಲಿನ ಕಸ–ಕಡ್ಡಿಗಳನ್ನು, ಪ್ಲಾಸ್ಟಿಕ್‌ ರಾಶಿಯನ್ನು ಆಯ್ದು ಶುಚಿಗೊಳಿಸಲು ಮುಂದಾಗುತ್ತಾರೆ. 

ಆದರೆ, ಇದರಿಂದ ಮಾತ್ರ ಕೆರೆಗಳ ಸ್ವಚ್ಛತೆ ಸಾಧ್ಯವಿಲ್ಲ. ಪಟ್ಟಣ ಪಂಚಾಯ್ತಿ ಆಸಕ್ತಿ ವಹಿಸದೇ ಇದ್ದರೆ ಕೆಲವೇ ವರ್ಷಗಳಲ್ಲಿ 
ಕೆರೆಗಳು ಮಾಯವಾಗಲಿವೆ ಎಂಬ ಆತಂಕದಲ್ಲಿ ಜನರಿದ್ದಾರೆ.
 
ಕೆರೆಗಳ ಪುನಶ್ಚೇತನ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಸೀಬಿನಕೆರೆ ಅಭಿವೃದ್ದಿಗೆ 2016–17ನೇ ಸಾಲಿನಲ್ಲಿ ₹ 55 ಲಕ್ಷ ಅನುದಾನ ಲಭ್ಯವಿದೆ. ಪಟ್ಟಣ ಪಂಚಾಯ್ತಿ ಉದ್ಯಮ ನಿಧಿಯಿಂದ ₹ 30 ಲಕ್ಷ ಕಾಯ್ದಿರಿಸಲಾಗಿದೆ. ಕೆರೆ ಅಭಿವೃದ್ಧಿಗೆ ಕನಿಷ್ಠ ₹ 2ಕೋಟಿಯಿಂದ ₹ 3 ಕೋಟಿ ಅನುದಾನ ಬೇಕಾಗಿದ್ದು, ಹೆಚ್ಚಿನ ನೆರವು ನಿರೀಕ್ಷಿಸಲಾಗುತ್ತಿದೆ ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ  ಸಂದೇಶ್‌ ಜವಳಿ. 
-ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.