ADVERTISEMENT

ಜೋಗ ಜಲಪಾತದಲ್ಲಿ ಮರುಕಳಿಸಿದ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 8:42 IST
Last Updated 22 ಜೂನ್ 2015, 8:42 IST

ಕಾರ್ಗಲ್:  ಶರಾವತಿ ಕಣಿವೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜೋಗ ಜಲಪಾತದಲ್ಲಿ ವರ್ಷಧಾರೆ ಮರುಕಳಿಸಿದ್ದು, ಭಾನುವಾರ ಸಾವಿರಾರು ಪ್ರವಾಸಿಗರು ನಿಸರ್ಗದತ್ತ ಜಲಪಾತದ ಸೌಂದರ್ಯವನ್ನು ನೋಡಿ ಆನಂದ ಪಡುವ ದೃಶ್ಯ ಕಂಡು ಬಂದಿತ್ತು.

   ಮೈದುಂಬಿರುವ ಜಲಪಾತದ ಸೊಬಗು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಸವಿಯಬಹುದಾಗಿದೆ. ಮಳೆಗಾಲದ ಆರಂಭದಲ್ಲಿ ತನ್ನ ಸಹಜ ಪಾರಂಪರಿಕ ಸೌಂದರ್ಯದೊಂದಿಗೆ ಮೈದುಂಭಿ ಹರಿಯುವ ಶರಾವತಿ ಅರ್ಭಟವಿಲ್ಲದೇ ಕೇವಲ ರಭಸದೊಂದಿಗೆ ಧುಮ್ಮಿಕ್ಕುವ ಕಾರಣ ಜಲಪಾತ ಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬರುವುದಿಲ್ಲ. ಇದು ಪ್ರವಾಸಿಗರ ಮತ್ತು ಛಾಯಾಗ್ರಾಹಕರ ಪಾಲಿಗೆ ವರದಾನವಾಗಿ ಕಂಡು ಬರುತ್ತಿದೆ.

ಪ್ರವಾಸಿಗರಿಲ್ಲದೇ ಬರಡಾಗಿದ್ದ ಜೋಗ ಜಲಪಾತ ಪ್ರದೇಶ ಪ್ರವಾಸಿ ವಾಹನಗಳ ಮತ್ತು  ಪ್ರವಾಸಿಗರ ಆಗಮನದ ಕಾರಣ ನವೋಲ್ಲಾಸದೊಂದಿಗೆ ಚಟುವಟಿಕೆಯಲ್ಲಿ ಮುಳುಗಿರುವುದು ಕಂಡು ಬರುತ್ತಿದೆ. ಸ್ಥಳೀಯ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದ್ದು, ಛಾಯಾಗ್ರಾಹಕರು ತಮ್ಮ ದೈನಂದಿನ ಬದುಕಿಗೆ ಚಾಲನೆ ದೊರೆತಿರುವ ಕಾರಣ ಲವ ಲವಿಕೆಯಿಂದ ಓಡಾಡುತ್ತಿದ್ದಾರೆ. ಸ್ಥಳೀಯ ಹೋಂ ಸ್ಟೇ ಮಾಲೀಕರು ಪ್ರವಾಸಿಗರಿಗೆ ಮಲೆನಾಡಿನ ಅತಿಥಿ ಸತ್ಕಾರವನ್ನು ನೀಡುವ ನಿಟ್ಟಿನಲ್ಲಿ ಸಜ್ಜಾಗುತ್ತಿರುವುದು ಕಂಡು ಬರುತ್ತಿದೆ.

ಜೋಗ ಜಲಪಾತ ಪ್ರದೇಶವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಕನಸಿಗೆ ಜೀವ ಕೊಡುವ ನಿಟ್ಟಿನಲ್ಲಿ ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಸಾಗರ ಉಪವಿಭಾಗಾಧಿಕಾರಿ ನಿತೇಶ್ ಪಾಟೀಲ್ ಅವರು  ಜಲಪಾತ ತಾಣದಲ್ಲಿ ಬೀಡು ಬಿಟ್ಟಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.