ADVERTISEMENT

ಪರಿಭಾವಿತ ಅರಣ್ಯದಲ್ಲಿ ಮರ ಕಡಿತಲೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 6:09 IST
Last Updated 25 ಡಿಸೆಂಬರ್ 2017, 6:09 IST

ಸಾಗರ: ತಾಲ್ಲೂಕಿನ ನಾರಗೋಡು–ಕೊಪ್ಪ ಗ್ರಾಮದಲ್ಲಿನ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಮರಗಳಿಗೆ ಬೆಂಕಿ ಹಾಕಿ, ಶೆಡ್ ನಿರ್ಮಿಸಲು ಮುಂದಾದ ಕೃತ್ಯಕ್ಕೆ ಗ್ರಾಮಸ್ಥರು ಹಾಗೂ ಕಾನು ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಭಾನುವಾರ ತೀವ್ರ ವಿರೋಧ ವ್ಯಕ್ತಪಡಿಸಿದರು.

ಗ್ರಾಮದ ಸ.ನಂ 43ರಲ್ಲಿರುವ 24 ಎಕರೆ 8 ಗುಂಟೆ ಪ್ರದೇಶ ಖಾತೆ ಕಾನು ಆಗಿದ್ದು, ದೇವರಾಜಗೌಡ ಎಂಬುವವರು ಈ ಪ್ರದೇಶದ ಮಾಲೀಕರು ತಾವೆಂದು ಪ್ರತಿಪಾದಿಸುತ್ತಿದ್ದಾರೆ. ಕಳೆದ ತಿಂಗಳು ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಆಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು.

ನಂತರದ ಬೆಳವಣಿಗೆಯಲ್ಲಿ ಈ ಪ್ರದೇಶ ಖಾತೆ ಕಾನು ಆಗಿರುವುದರಿಂದ ಖಾಸಗಿ ವ್ಯಕ್ತಿ ಹೆಸರಿನಲ್ಲಿರುವ ಖಾತೆಯನ್ನು ರದ್ದುಗೊಳಿಸುವುದಾಗಿ ತಾಲ್ಲೂಕು ಆಡಳಿತ ತಿಳಿಸಿತ್ತು. ಆದರೆ, ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳದೇ ಮೃದು ಧೋರಣೆ ತಾಳಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ADVERTISEMENT

ಭಾನುವಾರ ನಾರಗೋಡು ಗ್ರಾಮಕ್ಕೆ ಬಂದಿದ್ದ ದೇವರಾಜಗೌಡ ಅವರ ಕಡೆಯವರು ಪರಿಭಾವಿತ ಅರಣ್ಯ ಪ್ರದೇಶದಲ್ಲಿನ ಮರಗಳಿಗೆ ಬೆಂಕಿ ಹಾಕಿ ಯಂತ್ರಗಳನ್ನು ಬಳಸಿ ಭೂಮಿಯನ್ನು ಸಮತಟ್ಟಲು ಮಾಡಲು ಮುಂದಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಸುದ್ದಿ ತಿಳಿದ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಬಂದು ಮರ ಕಡಿತಲೆಯನ್ನು ನಿಲ್ಲಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.