ADVERTISEMENT

ಮಾನವೀಯ ಸಂಬಂಧಕ್ಕೆ ಧರ್ಮಸಭೆಗಳು ಅವಶ್ಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:18 IST
Last Updated 12 ಜುಲೈ 2017, 5:18 IST

ಶಿಕಾರಿಪುರ: ‘ಪ್ರಸ್ತುತ ಕಳೆದು ಹೋಗುತ್ತಿರುವ ಮಾನವೀಯ ಸಂಬಂಧಗಳನ್ನು ಉಳಿಸಲು ಜನಜಾಗೃತಿ ಧರ್ಮಸಭೆಗಳು ಅವಶ್ಯಕವಾಗಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಇಷ್ಟಲಿಂಗ ಮಹಾಪೂಜೆ ಪ್ರಯುಕ್ತ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ತಾಲ್ಲೂಕು ಜಂಗಮ ವೀರಶೈವ ಸಮಾಜ ಆಯೋಜಿಸಿದ್ದ ಜನಜಾಗೃತಿ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಗೌರವಿಸುತ್ತಿವೆ. ದೇಶದಲ್ಲಿರುವ ಸ್ವಾಮೀಜಿಗಳು, ಸಾಧು,ಸಂತರು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಪ್ರಪಂಚದ ಯಾವುದೇ ರಾಷ್ಟ್ರಗಳಲ್ಲಿ ಈ ಪ್ರಮಾಣದ ಸಾಧು ಸಂತರು ದೊರೆಯಲು ಸಾಧ್ಯವಿಲ್ಲ’ ಎಂದು ಶ್ಲಾಘಿಸಿದರು.

ADVERTISEMENT

ವೀರಶೈವ ಧರ್ಮಕ್ಕೆ ಪ್ರಾಚೀನ ಇತಿಹಾಸ ಹಾಗೂ ಪರಂಪರೆ ಇದೆ. ಶರಣರು ನುಡಿದಂತೆ ನಡೆದಿದ್ದಾರೆ. ಜನಜಾಗೃತಿ ಧರ್ಮಸಭೆಯಲ್ಲಿ ಸ್ವಾಮೀಜಿಗಳ ಮಾತುಕೇಳಿ ಸನ್ಮಾರ್ಗದಲ್ಲಿ ನಡೆದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಇಷ್ಟಲಿಂಗ ಮಹಾಪೂಜೆ ಪ್ರಯುಕ್ತ ಆಗಮಿಸಿರುವ ರಂಭಾಪುರ ಪೀಠದ ಸ್ವಾಮೀಜಿಗಳ ಪಾದ ಸ್ಪರ್ಶದಿಂದ ಸಕಾಲಕ್ಕೆ ಮಳೆಯಾಗಲಿ’ ಎಂದರು.  

ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ‘ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವ ಸಮುದಾಯ ಧರ್ಮ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ಮನುಷ್ಯನ ಹೃದಯ ಕಮಲ ಅರಳಲು ಆಧ್ಯಾತ್ಮಿಕ ಬೆಳಕು ಬೇಕು. ರಂಭಾಪುರಿ ಪೀಠದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಇಷ್ಟಲಿಂಗ ಮಹಾಪೂಜೆ ಮೂಲಕ ಆಧ್ಯಾತ್ಮಿಕ ಬೆಳಕನ್ನು ತಾಲ್ಲೂಕಿನ ಜನತೆ ಪಡೆಯಬೇಕು’ ಎಂದು ಸಲಹೆ ನೀಡಿದರು. 

ಡಾ.ಉಷಾದೇವಿ ಉಪನ್ಯಾಸ ನೀಡಿದರು. ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶಿರ್ವಚನ ನೀಡಿದರು.
ಗುರುನಾಗಭೂಷಣ ಸ್ವಾಮೀಜಿ, ಮಹಾಂತ ದೇಶಿಕೇಂದ್ರಸ್ವಾಮೀಜಿ, ರೇವಣಸಿದ್ಧ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ, ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವಸ್ವಾಮೀಜಿ, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಪುರಸಭೆ ಮಾಜಿ ಸದಸ್ಯ ಚಂದ್ರಶೇಖರಯ್ಯ, ತಾಲ್ಲೂಕು ವೀರಶೈವ ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ಗೌರವಾಧ್ಯಕ್ಷ ಜಯದೇವಯ್ಯ, ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.