ಶಿವಮೊಗ್ಗ: ‘ರಾಜಕೀಯ ಪ್ರವೇಶಿ ಸುವ ಆಲೋಚನೆ ಇಲ್ಲ. ಪತ್ನಿ ಗೀತಾ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ನಟ ಶಿವರಾಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ನೆಹರೂ ರಸ್ತೆಯ ಬಸವ ಸದನದಲ್ಲಿ ಶುಕ್ರವಾರ ಕಲ್ಯಾಣ್ ಜುವೆಲರ್ಸ್ ನೂತನ ಮಳಿಗೆ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೊಡ್ಡ ವ್ಯಕ್ತಿ. ಅವರು ನಮ್ಮ ಮನೆಗೆ ಬಂದು ಅಮ್ಮನ ಸಾವಿನ ನೋವಿಗೆ ಸಾಂತ್ವನ ಹೇಳಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.
‘ಶಿವಮೊಗ್ಗ ಪತ್ನಿಯ ತವರು ಮನೆ. ಅಪ್ಪಾಜಿಗೂ ಇಷ್ಟವಾದ ಊರು. ಹಲವು ಬಾರಿ ಹಲವು ಕಾರಣಗಳಿಗಾಗಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಒಂದೇ ದಿನ ಇಂದು ಐದು ಜಿಲ್ಲೆಗಳಲ್ಲಿ ಚಿನ್ನಾಭರಣ ಮಳಿಗೆ ಉದ್ಘಾಟಿಸುತ್ತಿರುವುದು ವಿಶೇಷ. ಜೋಗ ಜಲಪಾತದಂತೆ ಜಿಲ್ಲೆ ಯಲ್ಲೂ ಚಿನ್ನದ ನೀರು ಹರಿಯಲಿ’ ಎಂದು ಆಶಿಸಿದರು.
‘ತಮ್ಮ ಲೀಡರ್, ಟಗರು ಚಿತ್ರ ಗಳು ಯಶಸ್ವಿ ಪ್ರದರ್ಶನ ಕಾಣುವ ವಿಶ್ವಾಸವಿದೆ. ಸಹೋದರ ಪುನೀತ್ ಅವರ ರಾಜಕುಮಾರ ಚಿತ್ರ ನೂರು ದಿನ ಪೂರೈಸಿರುವುದು ಸಂತಸ ಇಮ್ಮಡಿಗೊಳಿಸಿದೆ ಎಂದರು.
ಸಂಚಾರಕ್ಕೆ ಅಡಚಣೆ: ನಟ ಶಿವರಾಜ್ ಕುಮಾರ್ ಭೇಟಿ ಕಾರಣ ಬೆಳಿಗ್ಗೆಯಿಂದಲೇ ನೆಹರೂ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಮೂರ್ನಾಲ್ಕು ತಾಸು ವಾಹನ ಸವಾರರು ಪರದಾಡಿದರು. ಮಧ್ಯಾಹ್ನ 1.50ಕ್ಕೆ ಬಂದ ಶಿವರಾಜ್ಕುಮಾರ್ ಅಭಿಮಾನಿಗಳನ್ನು ಕುರಿತು ಮೂರು ನಿಮಿಷ ಮಾತನಾಡಿದರು. ಕಲ್ಯಾಣ್ ಜುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್.ಕಲ್ಯಾಣ ರಾಮನ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.