ಸಾಗರ: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಖಂಡಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ಮಾಡಿದರು. ಉಪ ವಿಭಾಗಾಧಿಕಾರಿ ಕಚೇರಿ ಆವರಣದಿಂದ ಸಾಗರ ಹೋಟೆಲ್ ವೃತ್ತದವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ನಂತರ ಬಹಿರಂಗ ಸಭೆ ನಡೆಸಿ, ಮನವಿ ಸಲ್ಲಿಸಿದರು.
‘ನಮ್ಮ ರಾಜ್ಯದಲ್ಲಿ ಕೊಲ್ಲುವ ಸಂಸ್ಕೃತಿ ಶಾಶ್ವತವಾಗಿ ನಿರ್ಮೂಲನೆಯಾಗಬೇಕು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸುಧಾರಣೆಯಾಗಬೇಕು. ಸಾಹಿತಿಗಳು, ವಿಚಾರವಾದಿಗಳು, ಪತ್ರಕರ್ತರು ಹಾಗೂ ಎಲ್ಲಾ ವರ್ಗದವರು ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸರ್ಕಾರ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆಯನ್ನು ಕಾಲಮಿತಿಯಲ್ಲಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವವರೆಗೂ ಸರ್ಕಾರ ನಿಗಾ ವಹಿಸಬೇಕು. ಪತ್ರಕರ್ತರ, ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ತಿನ ಪದಾಧಿಕಾರಿಗಳು ಒತ್ತಾಯಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಹಿತಕರ ಜೈನ್, ಸಾಹಿತಿ ನಾ.ಡಿಸೋಜ, ಲೇಖಕ ವಿಲಿಯಂ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಪರಶುರಾಮ್, ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಸರಸ್ವತಿ ಕುಮಾರಸ್ವಾಮಿ, ಸದಸ್ಯೆ ಪರಿಮಳಾ, ಎನ್.ಉಷಾ, ರವಿ ಜಂಬಗಾರು, ಸುಂದರ್ಸಿಂಗ್, ಲಲಿತಮ್ಮ, ವಿವಿಧ ಸಂಘಟನೆಗಳ ಪ್ರಮುಖರಾದ ಸೈಯದ್ ಜಮೀಲ್, ನಾಗರಾಜ್ ಗುಡ್ಡೆಮನೆ, ತಿರುಮಲ ಮಾವಿನಕುಳಿ, ನಾರಾಯಣ ಮೂರ್ತಿ
ಕಾನುಗೋಡು, ಶಿವಾನಂದ ಮಾಸೂರು, ಸೈಯದ್ ತನ್ವೀರ್, ಮೊಹಮ್ಮದ್ ಜಿಕ್ರಿಯಾ, ಎಂ.ಸಿ.ಪರಶುರಾಮಪ್ಪ, ಸಿರಿವಂತೆ ಚಂದ್ರಶೇಖರ್, ಪರಮೇಶ್ವರ್ ದೂಗೂರು, ಎಚ್.ಬಿ.ರಾಘವೇಂದ್ರ, ತಾರಾಮೂರ್ತಿ, ಕನ್ನಪ್ಪ ಮುಳುಕೇರಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.