ADVERTISEMENT

ಹಳೆಗನ್ನಡ ಸಾಹಿತ್ಯವೇ ದೊಡ್ಡ ಸಂಪತ್ತು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 7:26 IST
Last Updated 16 ಏಪ್ರಿಲ್ 2017, 7:26 IST

ಶಿವಮೊಗ್ಗ: ‘ಹಳೆಗನ್ನಡ ಸಾಹಿತ್ಯದಲ್ಲಿ ಭಾಷೆಯ ಅಪಾರ ಸಂಪತ್ತು ಅಡಗಿದೆ’ ಎಂದು  ಸಂಶೋಧಕ ಡಾ. ಪಾದೇಕಲ್ಲು ವಿಷ್ಣುಭಟ್ಟ ಹೇಳಿದರು.ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ತಿಂಗಳ ಅತಿಥಿ’ ಕಾರ್ಯಕ್ರಮದಲ್ಲಿ ‘ಹಳೆಗನ್ನಡ ಸಾಹಿತ್ಯದ ಪ್ರಸ್ತುತತೆ’ ವಿಷಯ ಕುರಿತು ಅವರು ಮಾತನಾಡಿದರು.

‘ಭಾಷೆಯನ್ನು ಕಡೆಗಣಿಸುವುದರಿಂದ ಅದರ ಅಸ್ತಿತ್ವ ಕಡಿಮೆಯಾಗುತ್ತಿದೆ. ಇತರೆ ಭಾಷೆಗಳನ್ನು ಬಳಸುವ ಹಾಗೆಯೇ ಹಳೆಗನ್ನಡವನ್ನು ಬಳಸಲು ಉತ್ಸಾಹ ತೋರಬೇಕು’ ಎಂದು ಮನವಿ ಮಾಡಿದರು.‘ಯಾವುದೇ ಭಾಷೆಯಾದರೂ ಸತತ ಬಳಕೆಯಿಂದ  ಅಸ್ತಿತ್ವ ಪಡೆಯುತ್ತದೆ. ಹಾಗೆಯೇ ಹಳೆಗನ್ನಡವನ್ನು ಕಲಿಯುವ ಮೂಲಕ ಅದರ ಅಸ್ತಿತ್ವವನ್ನು ಉಳಿಸಬೇಕು’  ಎಂದು ಸಲಹೆ ನೀಡಿದರು.

‘ಹಳೆಗನ್ನಡ ಸಾಹಿತ್ಯ ಭಾಷೆಯು ವ್ಯವಹಾರಕ್ಕೆ ಬಳಕೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.  ಹಳೆಗನ್ನಡ ಸಾಹಿತ್ಯವು ಮಾಹಿತಿಯ ಮೂಲವಾಗಿದೆ. ಅಂತಹ ಹಳೆಗನ್ನಡವನ್ನು ಇಂದು ತಿರಸ್ಕರಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಿಂದೆ ಸಾಹಿತಿಗಳು ಹಳೆಗನ್ನಡ ಸಾಹಿತ್ಯವನ್ನು ನಿರ್ಲಕ್ಷಿಸಿದ್ದರೆ ಭಾಷೆಯ ಪರಂಪರೆ, ಅದರ ಮೂಲ ಇಂದು ನಮಗೆ ದೊರೆಯುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳ ಹಳೆಗನ್ನಡ ಸಾಹಿತ್ಯವನ್ನು ಓದಿದಾಗ  ಹೊಸಹೊಸ ಪದಗಳ ಜತೆಗೆ ಆ ಪದಗಳ ಮಹತ್ವ, ಹಳೆಗನ್ನಡ ಭಾಷೆಯ ಸೊಗಡು, ಪರಂಪರೆ ತಿಳಿಯುತ್ತದೆ’ ಎಂದು ಹೇಳಿದರು.

‘ಯುವ ಸಮೂಹದಲ್ಲಿ ಹಳೆಗನ್ನಡದ ಅರಿವು ಹೆಚ್ಚಾಗಬೇಕು’ ಎಂದು ಸಲಹೆ  ನೀಡಿದರು.ಕಾರ್ಯಕ್ರಮದಲ್ಲಿ ಪ್ರೊ. ಕೆ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಂತೇಶ್ ಕದರಮಂಡಲಗಿ, ಎಚ್.ಎಸ್. ನಾಗಭೂಷಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.