ADVERTISEMENT

ಸರ್ಕಾರಿ ಭೂಮಿಯಲ್ಲಿದ್ದ 8 ಗುಡಿಸಲು ತೆರವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 7:10 IST
Last Updated 14 ಜನವರಿ 2018, 7:10 IST

ಹೊಸನಗರ: ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ನಾಗೋಡಿ ಗ್ರಾಮದಲ್ಲಿ ಕಂದಾಯ ಭೂಮಿ ಅತಿಕ್ರಮಣ ಮಾಡಿಕೊಂಡು ನಿರ್ಮಿಸಿದ್ದ 8 ಮನೆಗಳನ್ನು ಕಂದಾಯ ಅಧಿಕಾರಿಗಳು ಶುಕ್ರವಾರ ತೆರೆವುಗೊಳಿಸಿದರು.

ಇಲ್ಲಿನ ಸರ್ವೆ ನಂಬರ್ 181ರಲ್ಲಿ ಇತ್ತೀಚೆಗೆ ಕೆಲವರು ಸರ್ಕಾರಿ ಭೂಮಿ ಅತಿಕ್ರಮಿಸಿ, ಅನಧಿಕೃತವಾಗಿ ಗುಡಿಸಲುಗಳನ್ನು ನಿರ್ಮಾಣ ಮಾಡಿದ್ದರು. ಈ ಜಾಗಕ್ಕೆ ಹೊಂದಿಕೊಂಡಂತಿರುವ ಸರ್ವೆ ನಂಬರ್ 305ರಲ್ಲಿ ಬೇರೆ ಗ್ರಾಮದ ಕೆಲವು ವ್ಯಕ್ತಿಗಳು ಗುಡಿಸಲು ನಿರ್ಮಾಣಕ್ಕೆ ಮುಂದಾಗಿದ್ದರು.

ಸರ್ಕಾರಿ ಭೂಮಿ ಅತಿಕ್ರಮಣದ ಜತೆಗೆ ಗ್ರಾಮದ ಅಶಾಂತಿಗೆ ಕಾರಣವಾಗಬಹುದು ಎಂದು ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 8 ಮನೆಗಳನ್ನು ತೆರವುಗೊಳಿಸಿದರು.

ADVERTISEMENT

ಸರ್ವೆ ನಂಬರ್ 181ರಲ್ಲಿ ಭೂಮಿ ಅತಿಕ್ರಮಿಸಿದ್ದ ಸರೋಜ, ಲೀಲಾವತಿ, ರಾಧಾ ಹಾಗೂ ಸರ್ವೆ ನಂಬರ್ 305ರಲ್ಲಿ ಗುಡಿಸಲು ನಿರ್ಮಿಸಿದ್ದ ಮಂಜಗಳಲೆ ಗ್ರಾಮದ ಸ್ವಾಮಿ, ದಾಸನಾಯ್ಕ, ಗಣಪತಿ, ಕೃಷ್ಣಮೂರ್ತಿ, ಮಂಜಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅತಿಕ್ರಮಣ ಮಾಡಿದ ಬಹುತೇಕ ಮಂದಿಗೆ ಈ ಹಿಂದೆ ಸರ್ಕಾರದಿಂದ ಬೇರೆಡೆಗೆ ಭೂಮಿ ಮಂಜೂರಾಗಿರುವುದಾಗಿ ತಿಳಿದು ಬಂದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾರ್ಯಾಚರಣೆಯ ನೇತೃತ್ವವನ್ನು ರಾಜಸ್ವ ನಿರೀಕ್ಷಕ ಎ.ವಿ.ವೆಂಕಟೇಶಮೂರ್ತಿ ವಹಿಸಿದ್ದು, ಗ್ರಾಮ ಲೆಕ್ಕಾಧಿಕಾರಿ ಡಿ.ಪಿ.ಮಂಜಪ್ಪ, ನಾರಾಯಣ, ಗ್ರಾಮ ಸಹಾಯಕರಾದ ರವಿ, ಶೇಖರ, ಅಶೋಕ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.