ADVERTISEMENT

ಆರೋಗ್ಯ ಸುಧಾರಣೆಗೆ ವಾಯುವಿಹಾರ ಮದ್ದು

ಆಧುನಿಕ ಸಮಾಜದಲ್ಲಿ ಆರೋಗ್ಯ ಮತ್ತು ಸದೃಢ ಶರೀರ ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:00 IST
Last Updated 14 ಏಪ್ರಿಲ್ 2017, 5:00 IST

ತುಮಕೂರು: ‘ಅರ್ಧತಾಸು ವಾಯುವಿಹಾರ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧ ಆಗಬಲ್ಲದು’ ಎಂದು ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಎಸ್‌.ಎಂ.ಪ್ರಕಾಶ್‌ ಹೇಳಿದರು.

ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಗುರುವಾರ ಏರ್ಪಡಿಸಿದ್ದ ‘ಆಧುನಿಕ ಸಮಾಜದಲ್ಲಿ ಆರೋಗ್ಯ ಮತ್ತು ಸದೃಢ ಶರೀರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ವಿಶ್ವದಾದ್ಯಂತ ಕೋಟ್ಯಂತರ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಬದಲಾದ ಜೀವನ ಶೈಲಿಯೇ ಕಾರಣ. ಇಂತಹ ಸಂಕೀರ್ಣ ಸಮಸ್ಯೆಗೆ ಒತ್ತಡ ಮುಕ್ತ ಜೀವನ ನಡೆಸುವುದು ಅಗತ್ಯವಾಗಿದೆ’ ಎಂದರು.

‘ವ್ಯಸನಗಳಿಂದ ಮಾನವನ ದೇಹ ಕಾಯಿಲೆಯ ಗೂಡಾಗಿದೆ. ಧೂಮಪಾನದಿಂದ ಬಿಡುಗಡೆ ಆಗುವ ಹೊಗೆಯಲ್ಲಿ 250 ರಾಸಾಯನಿಕಗಳು ಪರಿಸರ ಸೇರುತ್ತಿವೆ. ಇದರಿಂದ ಶಾಸ್ವಕೋಶ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದರು.

‘ದೈಹಿಕ ಕಸರತ್ತು, ಪೌಷ್ಟಿಕ ಆಹಾರ ಸೇವನೆ, ಆರಾಮದಾಯಕ ನಿದ್ರೆ ಹಾಗೂ ಒತ್ತಡರಹಿತ ಜೀವನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅತಿಯಾದ ಮೊಬೈಲ್‌ ಬಳಕೆ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮೊಬೈಲ್‌ ವ್ಯಾಮೋಹದಿಂದ ಅಕ್ಷರಶಃ ಹುಚ್ಚರಂತೆ ಆಗಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ,‘ದೇಶದ ಜನರ ಜೀವನ ಶೈಲಿ ಬದಲಾಗಿರುವ ಕಾರಣ ಔಷಧಗಳ ಸೇವನೆ ಪ್ರಮಾಣ ಹೆಚ್ಚಾಗಿದೆ. ವಿಶ್ವದ ಶೇ 40 ರಷ್ಟು ಕಳಪೆ ಔಷಧಿಗಳಿಗೆ ಭಾರತವೇ ಮಾರುಕಟ್ಟೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರ ಆಸ್ಪತ್ರೆಗಳು ಜನರಿಂದ ದೂರವಾಗುತ್ತಿವೆ. ಅವುಗಳ ಜಾಗದಲ್ಲಿ ಹೈಟೆಕ್‌, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ತಲೆ ಎತ್ತುತ್ತಿವೆ. ಆರೋಗ್ಯ ರಕ್ಷಣೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ. ಒಂದೆಡೆ ಹೊಸ ಔಷಧಿಗಳ ಅನ್ವೇಷಣೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅವುಗಳ ಬಳಕೆ ಹೆಚ್ಚುತ್ತಿದೆ’ ಎಂದು ಹೇಳಿದರು

*
‘ಉತ್ತಮ ಆರೋಗ್ಯ ಹೊಂದಲು ರಾಸಾಯನಿಕ ಮುಕ್ತವಾದ ಸಾವಯವ ಪದಾರ್ಥಗಳನ್ನು ಉಪಯೋಗಿಸುವುದು ಒಳಿತು’.
-ಪ್ರೊ.ಎಸ್‌.ಎಂ.ಪ್ರಕಾಶ್‌, ದೈಹಿಕ ಶಿಕ್ಷಣ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT