ADVERTISEMENT

ಕುಂಬಾರ ಜನಾಂಗದ ಏಳಿಗೆಗೆ ನೆರವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:46 IST
Last Updated 14 ಏಪ್ರಿಲ್ 2017, 4:46 IST

ತಿಪಟೂರು: ‘ಸಣ್ಣ ಸಮುದಾಯವಾದ ಕುಂಬಾರ ಜನಾಂಗದ ಅಭಿವೃದ್ಧಿ ಎಲ್ಲ ರೀತಿಯ ಸಹಕಾರ ಅಗತ್ಯ. ನಗರದಲ್ಲಿ ಕುಂಬಾರರ ಹಾಸ್ಟೆಲ್‌ಗೆ ನಿವೇಶನ ದೊರಕಿಸಲು ಮತ್ತು ಸಮುದಾಯ ಭವನಕ್ಕೆ ಅನುದಾನ ಕೊಡಲು ತಾವು ಬದ್ಧ’ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದಲ್ಲಿ ಶಾಲಿವಾಹನ ಕುಂಬಾರ ಸೇವಾ ಸಂಘದಿಂದ ಗುರುವಾರ ನಡೆದ ಸರ್ವಜ್ಞ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಣ್ಣ ಜನಾಂಗಗಳ ಅಭಿವೃದ್ಧಿಗೆ ದೊಡ್ಡ ಸಮುದಾಯಗಳು ಸಹಕರಿಸಬೇಕು. ಎಲ್ಲ ಶೂದ್ರರು ತಮ್ಮ ಬದುಕಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಜಾಗೃತರಾಗಬೇಕು. ಸಮಾಜಕ್ಕೆ ಕುಂಬಾರ ಸಮಾಜದ ಕೊಡುಗೆ ಅಪಾರ.

ಈ ಸಮುದಾಯ ಮೂಲ ವೃತ್ತಿ ನೆಚ್ಚಿ ಕೂರದೆ ಶಿಕ್ಷಣದ ಮೂಲಕ ಅವಕಾಶಗಳನ್ನು ಹುಡುಕಿಕೊಳ್ಳಬೇಕು. ಸಾಧನೆ ಹಾದಿಯಲ್ಲಿ ಸಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಬೇಕು. ಕವಿ ಸರ್ವಜ್ಞ ತಮ್ಮ ಸಾಹಿತ್ಯದಿಂದ ಇಂದಿಗೂ ಜನ ಮಾನಸದಲ್ಲಿ ಉಳಿದಿದ್ದಾರೆ. ಎಲ್ಲ ವಿಚಾರಗಳಲ್ಲೂ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.

ಮಕ್ಕಳು ಸಾಹಿತಿ ಪ್ರೊ. ಟಿ.ಎಸ್. ನಾಗರಾಜಶೆಟ್ಟಿ ಉಪನ್ಯಾಸ ನೀಡಿ, ‘ಕವಿ ಸರ್ವಜ್ಞರ ತ್ರಿಪದಿಗಳು ಸಮಾಜದಲ್ಲಿ ಬೆರೆತು ಹೋಗಿವೆ. ಗಾಧೆಗಳ ರೂಪದಲ್ಲಿ ಮೌಖಿಕವಾಗಿ ಕೂಡ ಇವರ ಸಾಹಿತ್ಯ ಹರಿದಾಡುತ್ತಿದೆ. ಚುಟುಕು ಮತ್ತು ಚುರುಕಾದ ಇವರ ತ್ರಿಪದಿಗಳು ಸಮಾಜಕ್ಕೆ ದಾರಿ ದೀಪವಾಗಿವೆ’ಎಂದರು.

‘ಪಾಂಡಿತ್ಯವನ್ನು ಮೀರಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿಶಿಷ್ಟ ಸಾಹಿತ್ಯ ರೂಪಿಸಿ ಸಮಾಜವನ್ನು ಪ್ರಭಾವಿಸಿದ ಶ್ರೇಷ್ಠ ದಾರ್ಶನಿಕ ಸರ್ವಜ್ಞ’ ಎಂದರು.

ಕುಂಬಾರ ಸಂಘದ ಅಧ್ಯಕ್ಷ ಜಯಣ್ಣ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕವಿ ಟಿ.ಎಸ್. ನಾಗರಾಜಶೆಟ್ಟಿ, ಕುಂಬಾರ ಜನಾಂಗಕ್ಕೆ ಸಹಕಾರ ನೀಡಿದ ಪುಟ್ಟಶೆಟ್ಟಿ, ನಂಜಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಂಕರಲಿಂಗೇಗೌಡ, ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಗಂಗಮ್ಮ, ನಗರಸಭೆ ಸದಸ್ಯೆ ಗಂಗಮ್ಮ ಇದ್ದರು. ಶುಶ್ರುತ ಪ್ರಾರ್ಥಿಸಿದರು. ಪಿ. ಗೋವಿಂದರಾಜು ಸ್ವಾಗತಿಸಿದರು. ಸುಂದರ್ ನಿರೂಪಿಸಿದರು. ಸೋಮಶೇಖರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.