ಹುಲಿಯೂರುದುರ್ಗ: ಹೋಬಳಿ ನಿಡಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಯ್ಯನಪಾಳ್ಯ ಗ್ರಾಮದ ರೈತ ಅಂದಾನಯ್ಯ ಕೆಸ್ತೂರು ರೈತ ಸಂಪರ್ಕದಿಂದ ಕೊಂಡು ಬಿತ್ತನೆ ಮಾಡಿದ ಪ್ರಮಾಣೀಕೃತ ರಾಗಿ ಬಿತ್ತನೆ ಬೀಜ ಉತ್ತಮ ಫಸಲಿನ ತೆನೆ ಹೊರಡುವ ಬದಲಿಗೆ ಮರುಪೈರಿನ ಗುಚ್ಚಗಳು ಒಡೆದು ತೀವ್ರ ಹಾನಿ ಉಂಟು ಮಾಡಿದೆ.
'ಮೂವತ್ತು ಗುಂಟೆ ಹೊಲದಲ್ಲಿ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿ ತಂದಿದ್ದ ಜಿಪಿಯು-28 ತಳಿಯ ಬಿತ್ತನೆ ರಾಗಿ ತೆನೆ ಒಡೆಯುವ ಹಂತದಲ್ಲಿ ಹೀಗಾಗಿದೆ. ಒಂದಿಷ್ಟು ಜೊಳ್ಳು ಕಾಳುಗಳ ಹೊರತು ಇದರಲ್ಲಿ ಇನ್ನೇನೂ ಇಲ್ಲ' ಎಂದು ರೈತ ಅಂದಾನಯ್ಯ ಹಾಗೂ ಅವರ ಮಗ ನವೀನ್ ಅಲವತ್ತುಕೊಂಡರು.
ಈ ಕುರಿತು ಕೃಷಿ ಇಲಾಖೆಯ ಅಧಿಕಾರಿ ದೇವರಾಜ್ ಅವರನ್ನು ಸಂರ್ಕಿಸಿದಾಗ 'ಕೆಸ್ತೂರಿನ ರೈತ ಸಂರ್ಕ ಕೇಂದ್ರ ಮದ್ದೂರು ತಾಲ್ಲೂಕಿಗೆ ಸೇರಿದೆ. ರಾಗಿಯ ಕೆಲವು ತಾಕುಗಳಲ್ಲಿ 2-3 ವರ್ಷಗಳಿಗೊಮ್ಮೆ ಹೀಗಾಗುವುದಿದೆ. ಒಂದು ಬಗೆಯ ವೈರಸ್ ನಿಂದ ಹರಡುವ ಫೈಟೋಪ್ಲಾಸಮ್ ಎಂಬ ಸಾಂಕ್ರಾಮಿಕ ರೋಗ ಇದಕ್ಕೆ ಕಾರಣ. ಆಕಸ್ಮಿಕವಾಗಿ ಪ್ರಮಾಣೀಕೃತ ಬಿತ್ತನೆಯ ಕಾಳುಗಳ ಜೊತೆಗೆ ಸೇರ್ಪಡೆಯಾಗುವ ರೋಗ ಬಾದಿತ ಕಾಳುಗಳಿಂದ ಸಮಸ್ಯೆ ಉಂಟಾಗುತ್ತದೆ' ಎಂದರು.
'ಬಿತ್ತನೆ ಬೀಜ ಕೊಂಡ ಅಧಿಕೃತ ರಸೀದಿ ಇದ್ದು ಬಹುತೇಕ ರೈತರ ರಾಗಿಯ ತಾಕುಗಳಲ್ಲಿ ಈ ಬಗೆಯ ಹಾನಿ ಉಂಟಾಗಿದ್ದರೆ ಇಲಾಖೆಯಿಂದ ಹಲವು ಹಂತಗಳ ಪ್ರಕ್ರಿಯೆ ಪೂರ್ಣಗೊಂಡು ಪರಿಹಾರ ಪಡೆಯಬಹುದಾಗಿದೆ' ಎಂದು ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.