ತುಮಕೂರು: ದ್ವಿತೀಯ ಪಿಯು ಪರೀಕ್ಷೆ ಬುಧವಾರ ಸುಸೂತ್ರವಾಗಿ ನಡೆಯಿತು. ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ನಕಲಿಗೆ ಆಸ್ಪದ
ನೀಡದೇ ಪೊಲೀಸ್ ಹಾಗೂ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಯಿತು.
ವೇಳೆ ಬದಲಾವಣೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿತ್ತು. ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆದರು.
ಬುಧವಾರ ನಡೆದ ಇತಿಹಾಸ ವಿಷಯ ಪರೀಕ್ಷೆಗೆ ಒಟ್ಟು 15200 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 13801 ಮಂದಿ ಪರೀಕ್ಷೆಗೆ ಹಾಜರಾದರು. 1358 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಅದೇ ರೀತಿ ಜೀವವಿಜ್ಞಾನ ವಿಷಯಕ್ಕೆ ನೋಂದಣಿ ಮಾಡಿಕೊಂಡ 6805 ವಿದ್ಯಾರ್ಥಿಗಳಲ್ಲಿ 6555 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 240 ಮಂದಿ ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಸ್ವಾಮಿ ಪ್ರಜಾವಾಣಿಗೆ ತಿಳಿಸಿದರು. ಶುಕ್ರವಾರ (ಮಾ.10) ಎಲೆಕ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದ ಪರೀಕ್ಷೆ ನಡೆಯಲಿದೆ.
ಪಾವಗಡ: ಪಿ.ಯು. ಪರೀಕ್ಷೆ ಅವ್ಯವಸ್ಥೆ
ಪಾವಗಡ: ಪಟ್ಟಣದ ವೆಂಕಟೇಶ್ವರ ಕಾಲೇಜಿನಲ್ಲಿ ಗುರುವಾರ ಪಿ.ಯು. ಪರೀಕ್ಷಾರ್ಥಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸದ ಕಾರಣ ವಿದ್ಯಾರ್ಥಿಗಳು, ಪೋಷಕರು ಕೆಲ ಕಾಲ ಆತಂಕಕ್ಕೀಡಾದರು. ನೋಂದಣಿ ಸಂಖ್ಯೆಯನ್ನು ಪ್ರಕಟಣಾ ಫಲಕಕ್ಕೆ ಅಂಟಿಸಿರಲಿಲ್ಲ. ಜೊತೆಗೆ ಸಾಕಷ್ಟು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಪರೀಕ್ಷಾ
ಕೊಠಡಿಯಲ್ಲಿ ನಮೂದಿಸಿರಲಿಲ್ಲ. ಹೀಗಾಗಿ ಪರೀಕ್ಷೆ ಆರಂಭವಾದ ನಂತರವೂ ವಿದ್ಯಾರ್ಥಿಗಳು ಎಲ್ಲಿ ಪರೀಕ್ಷೆ ಬರೆಯಬೇಕು ಎಂದು
ಓಡಾಡಿದರು.
ಕಾಲೇಜಿನ ಸಿಬ್ಬಂದಿ ನಿರ್ಲಕ್ಷ್ಯದ ಹೇಳಿಕೆಗಳನ್ನು ನೀಡಿದ್ದರಿಂದ ಪೋಷಕರು, ಸಿಬ್ಬಂದಿ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಅರ್ಧ ತಾಸಿನ ನಂತರ ಕೊಠಡಿಯೊಂದರಲ್ಲಿ ಕೂರಿಸಿ ಮಕ್ಕಳಿಂದ ಪರೀಕ್ಷೆ ಬರೆಸಲಾಯಿತು. ಪರೀಕ್ಷೆ ಕೇಂದ್ರದಲ್ಲಿನ ಅವ್ಯವಸ್ಥೆ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.