ತುಮಕೂರು: ಕೋಮು ಸೌಹಾರ್ದಕ್ಕೆ ಬಾಧಕವಾಗುವಂತಹ ಮಾತುಗಳ ವಿಡಿಯೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಹೊನ್ನಾಪುರ ಗ್ರಾಮದ ಅತುಲ್ ಕುಮಾರ್ ರಾಮಚಂದ್ರಪ್ಪ ಸಭರ್ವಾಲ್ ಅವರನ್ನು ಬಂಧಿಸಲಾಗಿದೆ.
ಅತುಲ್ ಕುಮಾರ್ (ಮಧುಗಿರಿ ಮೋದಿ), ಹಿಂದೂ ಸಾಮ್ರಾಟ್ ಧರ್ಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಂದು ಹೇಳಿಕೊಂಡು, ‘ರಕ್ತಚರತ್ರೆ’ ಎನ್ನುವ ಶಿರ್ಷಿಕೆಯಡಿ ಎರಡು ಧರ್ಮಗಳ ನಡುವೆ ವೈರತ್ವ ಮತ್ತು ದ್ವೇಷದ ಭಾವನೆಗಳನ್ನು ಹೆಚ್ಚಿಸುವಂತವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ ಆ್ಯಪ್ ಹರಿಬಿಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ವಿರುದ್ಧ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಕಲಂ 152 (ಎ), 504, 506 ಐ.ಪಿ.ಸಿ ಮತ್ತು 67 ಐ.ಟಿ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಕೋಮು ಸೌಹಾರ್ದಕ್ಕೆ ಧಕ್ಕೆ ಆಗುವಂತಹ ವಿಡಿಯೊ ಅಥವಾ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಅಪರಾಧವಾಗಿದ್ದು, ಇಂತಹ ಸಂದೇಶಗಳನ್ನು ಸಾರ್ವಜನಿಕರು ಸ್ವೀಕರಿಸಿದಾಗ ಅಥವಾ ಪ್ರಚಾರದಲ್ಲಿರುವುದು ಅವರ ಗಮನಕ್ಕೆ ಬಂದಾಗ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.