ADVERTISEMENT

ಬಹುತೇಕ ತರಕಾರಿ ಬೆಲೆ ಸ್ಥಿರ

ನಿಫಾ ವೈರಸ್ ಕಾರಣಕ್ಕೆ ಕುಸಿದಿದ್ದ ಮಾವಿನ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:25 IST
Last Updated 13 ಜೂನ್ 2018, 10:25 IST

ತುಮಕೂರು: ಕಳೆದ ಎರಡು ವಾರಗಳಿಗೆ ಹೊಲಿಸಿದರೆ ಮೆಣಸಿನಕಾಯಿ, ಹುರುಳಿಕಾಯಿ (ಬೀನ್ಸ್‌), ಪುದಿನಾ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.  ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ ಬೆಲೆಯಲ್ಲಿ ಇಳಿಕೆಯಾಗಿದೆ.

ಎರಡು ವಾರಗಳ ಹಿಂದೆ ಮೆಣಸಿನಕಾಯಿ ಕೆ.ಜಿ.ಗೆ ₹ 30ರಿಂದ 35 ಮಾರಾಟವಾಗುತ್ತಿತ್ತು. ಈ ವಾರ ₹ 45–50 ಬೆಲೆ ಇದೆ. ಕೆಜಿಗೆ ₹ 40ರಿಂದ 45ಕ್ಕೆ ಮಾರಾಟವಾಗುತ್ತಿದ್ ಬೀನ್ಸ್ ಈ ವಾರ ₹55ರಿಂದ 65, ಕಟ್ಟಿಗೆ ₹ 40ರಿಂದ 55ರ ವರೆಗೆ ಮಾರಾಟವಾಗಿದ್ದ ಪುದಿನಾ ಈ ವಾರ ₹ 60–65ಕ್ಕೆ ಮಾರಾಟವಾಗುತ್ತಿದೆ.

ಕೊತ್ತಂಬರಿ ₹ 120ರಿಂದ 100ಕ್ಕೆ, ನುಗ್ಗೇಕಾಯಿ 50ರಿಂದ 40ಕ್ಕೆ ಇಳಿಕೆ ಆಗಿದೆ. ಕಳೆದೆರಡು ವಾರಗಳಿಂದ ಟೊಮೆಟೊ ಮತ್ತು ಈರುಳ್ಳಿ
ಬೆಲೆ ಸ್ಥಿರವಾಗಿದೆ. ಟೊಮೆಟೊ ಚೀಲಕ್ಕೆ ₹ 200ರಿಂದ 250 ಮಾರಾಟವಾಗುತ್ತಿದೆ. ಈರುಳ್ಳಿ 2.5 ಕೆಜಿಗೆ ₹ 40 ಇದೆ.

ADVERTISEMENT

ಬೆಲೆ ಸ್ಥಿರ: ಕ್ಯಾರೆಟ್‌ ಕೆ.ಜಿ.ಗೆ ₹ 25, ಬೀಟ್‌ರೂಟ್‌ ₹ 20, ಮೂಲಂಗಿ ₹ 25, ಬದನೆಕಾಯಿ ₹ 20, ತೊಂಡೆಕಾಯಿ ₹ 10, ಸೌತೆಕಾಯಿ ಒಂದಕ್ಕೆ ₹ 8, ಎಲೆ ಕೋಸು ₹ 30, ಹೂ ಕೋಸು ₹ 20, ಬೆಳ್ಳುಳ್ಳಿ ₹ 45, ಶುಂಠಿ ₹ 80, ಆಲೂಗಡ್ಡೆ ₹ 30, ಸೀಮೆ ಬದನೆ ₹ 20, ಆವರೆ ಕಾಯಿ ₹ 50, ನಿಂಬೆ ಹಣ್ಣು ₹ 10ಕ್ಕೆ 5ರಂತೆ ಎರಡು ವಾರಗಳಿಂದಲೂ ಮಾರಾಟವಾಗುತ್ತಿವೆ.

ಮಾವಿನ ಬೆಲೆ ಏರಿಕೆ: ಕೆ.ಜಿ.ಗೆ ₹ 170ರಿಂದ 180ರವರೆಗೆ ಮಾರಾಟವಾಗುತ್ತಿದ್ದ ಸೇಬು ಈ ವಾರ 200ರವೆಗೆ ಮಾರಾಟವಾಗುತ್ತಿದೆ. ನಿಫಾ ವೈರಸ್‌ ಭೀತಿಯಿಂದ ಬೆಲೆ ಕುಸಿತಕ್ಕೆ ಒಳಗಾಗಿದ್ದ ಮಾವು ಈ ವಾರ ಚೇತರಿಕೆ ಕಂಡಿದೆ.

ಎರಡು ವಾರಗಳಿಂದ ಹುಳಿ ದ್ರಾಕ್ಷಿ ಕೆ.ಜಿ. ₹ 200ರವರೆಗೆ ಮಾರಾಟವಾಗುತ್ತಿತ್ತು. ಆದರೆ ಈ ವಾರ ಸಿಹಿ ದ್ರಾಕ್ಷಿ ಪ್ರವೇಶದಿಂದ ಹುಳಿ ದ್ರಾಕ್ಷಿ ₹ 160ಕ್ಕೆ ಇಳಿಕೆ ಕಂಡಿದೆ. ದಾಳಿಂಬೆ ಕೆ.ಜಿ. ₹ 140, ಸಪೋಟಾ ₹ 30, ಮೂಸಂಬಿ ₹ 60, ಕಲ್ಲಂಗಡಿ ₹ 30, ಪಪ್ಪಾಯ ₹ 40ದ ಬೆಲೆಯಲ್ಲಿ 15 ದಿನಗಳಿಂದ ಸ್ಥಿರವಾಗಿವೆ.

ಇತ್ತೀಚೆಗೆ ಮಳೆ ಗಾಳಿ ಹೆಚ್ಚಾಗಿರುವುದರಿಂದ ಬೆಳೆ ಹಾಳಾಗುತ್ತದೆ ಎನ್ನುವ ಆಂತಕ ರೈತರಲ್ಲಿ ಇದೆ. ಆದ್ದರಿಂದ ತರಕಾರಿಯನ್ನು ರೈತರೆ ಮಾರುಕಟ್ಟೆಗೆ ತರುತ್ತಿದ್ದಾರೆ.

ತರಕಾರಿ ಬೆಳೆಯುವುದಿಲ್ಲ

5 ವರ್ಷಗಳಿಂದ ತರಕಾರಿಯನ್ನು ಸಂತೋಷದಿಂದ ಬೆಳೆಯುತ್ತಿದ್ದೆ. ಲಾಭವೂ ಸಿಗುತ್ತಿತ್ತು. ಆದರೆ ಇತ್ತೀಚೆಗೆ ತರಕಾರಿಯಲ್ಲಿ ಯಾವುದೇ ಲಾಭ ಇಲ್ಲ. ಬೇಸರವಾಗಿದ್ದು, ತರಕಾರಿ ಬೆಳೆ ಬಿಟ್ಟು ನಗರಕ್ಕೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸಬೇಕು ಎಂದುಕೊಂಡಿದ್ದೇವೆ ಎಂದು ರೈತ ಮಾರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ; ಬೆಲೆ ಕುಸಿತ

ಇತ್ತೀಚೆಗೆ ಮಳೆ ಬರುತ್ತಿದೆ. ಉತ್ತಮ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ರೈತರು ಮಳೆ ಭೀತಿಯಿಂದ ಮಾರುಕಟ್ಟೆಗೆ ತರಕಾರಿ ಹೆಚ್ಚು ತರುತ್ತಿದ್ದಾರೆ. ಆದರೆ ಬೆಲೆ ಸ್ಥಿರವಾಗಿರುವುದರಿಂದ ರೈತರು ಬೇಸರ ಮಾಡಿಕೊಂಡು ಹಿಂತಿರುಗುವುದನ್ನು ನೋಡಿದರೆ ಮಾರುಕಟ್ಟೆಗೆ ತರಕಾರಿ ತರುತ್ತಾರೋ ಇಲ್ಲವೋ ಎಂಬ ಭಯ ಕಾಡುತ್ತಿದೆ ಎಂದು ವ್ಯಾಪಾರಿ ರಮಣ ತಿಳಿಸಿದರು.

ಬೆಲೆ ಸ್ಥಿರ; ಬೇಸರವಿಲ್ಲ

ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದ್ದರೂ ಬೇಸರವಿಲ್ಲ. ರೈತರಿಂದ ನೇರವಾಗಿ ಖರೀದಿಸಿ ಮಾರುವುದರಿಂದ ಯಾವುದೇ ಮೋಸ ಮಾಡುವುದಿಲ್ಲ. ಬೆಲೆ ಕುಸಿತ, ಏರಿಕೆ ಮಾಮೂಲಿ. ಇನ್ನೂ ಮಳೆ ಬಂದರೆ ಒಳ್ಳೆಯದೇ ಅಲ್ಲವೇ ಎನ್ನುವರು ವ್ಯಾಪಾರಿ ಮಂಜುನಾಥ್.

ಬೇಸರವಾಗಿದೆ

ಮಳೆಯ ನಡುವೆ ಉತ್ತಮ ತರಕಾರಿ ಬೆಳೆಯುತ್ತಿದ್ದೇವೆ. ಆದರೆ ದರ ಸ್ಥಿರವಾಗಿರುವುದರಿಂದ ಬೇಸರವಾಗಿದೆ. ಒಳ್ಳೆಯ ಬೆಲೆ ಸಿಕ್ಕಿದ್ದರೆ ಲಾಭವನ್ನು ಕಾಣುತ್ತಿದ್ದೆವು ಎನ್ನುತ್ತಾರೆ ಗುಬ್ಬಿ ತಾಲ್ಲೂಕು ಸಿಂಗೋನಹಳ್ಳಿ ರೈತ ಲಕ್ಷ್ಮಯ್ಯ.

ಎಷ್ಟೇ ಕಷ್ಟವಾದರೂ ತರಕಾರಿ ಬೆಳೆದು ಮಾರುಕಟ್ಟೆಗೆ ತರುತ್ತೇವೆ. ಆದರೆ ದರ ಕುಸಿಯುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ
- ರಾಮಯ್ಯ, ರೈತ, ಗೊಲ್ಲಹಳ್ಳಿ.

–ವಿಷ್ಣುವರ್ಧನ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.