ತುಮಕೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಸಿದ್ದಗಂಗಾ ಮಠಕ್ಕೆ ಶುಕ್ರವಾರ ಕರೆದುಕೊಂಡು ಬರಲಾಯಿತು.ಜಾಂಡೀಸ್, ಜ್ವರ, ಪಿತ್ತನಾಳದ ಸೋಂಕಿನಿಂದ ಬಳಲುತ್ತಿದ್ದ ಶ್ರೀಗಳಿಗೆ ಗುರುವಾರ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಸ್ಟೆಂಟ್ ಅಳವಡಿಸಲಾಗಿತ್ತು.
ಮಠಕ್ಕೆ ಬಂದ ಸ್ವಾಮೀಜಿ ಅವರು ಲವಲವಿಕೆಯಿಂದ ಇದ್ದರು. ಆದರೆ ಮಧ್ಯಾಹ್ನದ ವೇಳೆಗೆ ಅವರಲ್ಲಿ ಸ್ವಲ್ಪ ಸುಸ್ತು ಕಾಣಿಸಿಕೊಂಡಿತು. ಸಂಜೆ ವೇಳೆಗೆ ಮತ್ತೆ ಚೇತರಿಕೆ ಕಂಡುಬಂತು. ವಿಶ್ರಾಂತಿಯ ಕಾರಣ ಶ್ರೀಗಳ ಭೇಟಿಗೆ ಭಕ್ತರಿಗೆ ಅವಕಾಶ ಇರಲಿಲ್ಲ.
ಬೆಳಿಗ್ಗೆ 11 ಗಂಟೆಗೆ ಸ್ನಾನದ ಬಳಿಕ ಹಣ್ಣಿನ ರಸ ನೀಡಲಾಯಿತು. ಆದರೆ ಅವರು ಸೇವಿಸಲಿಲ್ಲ. ಮಧ್ಯಾಹ್ನ 3ಕ್ಕೆ ಸ್ನಾನ, ಪೂಜೆ ಮುಗಿಸಿದ ಬಳಿಕ ಊಟ ಸೇವಿಸಿದರು.
ಮಡಿ ಇಲ್ಲದೇ ಶ್ರೀಗಳು ಏನನ್ನು ಸೇವಿಸುವುದಿಲ್ಲ.
ಸ್ವಲ್ಪ, ಸ್ವಲ್ಪವೇ ಆಹಾರ ಸೇವಿಸುವುದರಿಂದ ದಿನದಲ್ಲಿ ನಾಲ್ಕು ಸಲ ಸ್ನಾನ ಮಾಡಿಸಿ ಆಹಾರ ನೀಡಲು ನಿರ್ಧರಿಸಲಾಗಿದೆ. ಸ್ವಾಮೀಜಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಸ್ಥಳೀಯ ವೈದ್ಯರನ್ನು ಪಾಳಿ ಮೇಲೆ ನೇಮಕ ಮಾಡಲಾಗಿದೆ. ಶ್ರೀಗಳ ಜತೆಯಲ್ಲಿ ಕಣ್ಣೂರು ಸ್ವಾಮೀಜಿ ಹಾಗೂ ಅವರ ಸಹಾಯಕರು ಇರುತ್ತಾರೆ ಎಂದು ಮಠದ
ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.