ತುರುವೇಕೆರೆ: ‘ಸಹಕಾರಿ ಸಂಘಗಳಿಂದ ಮಹಿಳೆಯರಿಗೆ ಮೂರು ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡುವ ಮೂಲಕ ಮಹಿಳೆಯರು ಆರ್ಥಿಕ ಸಬಲರಾಗುವ ಗುರಿ ಹೊಂದಲಾಗಿದೆ’ ಎಂದು ಮಧುಗಿರಿ ಶಾಸಕ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಣತೂರು ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಸಂಘದ 604 ಸದಸ್ಯರಿಗೆ ಏಕ ಕಾಲದಲ್ಲಿ ₹ 1.50 ಕೋಟಿ ಕೆಸಿಸಿ ಸಾಲ ಮಂಜೂರು ಮಾಡಿದ ಪ್ರಯುಕ್ತ ಸಂಘದ ನಿರ್ದೇಶಕ ಮತ್ತು ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತುರುವೇಕೆರೆ ಎಲ್ಲ ಸಹಕಾರಿ ಸಂಘಗಳಲ್ಲಿ ಸಾಲ ಪಡೆದ ರೈತರ ₹ 47 ಕೋಟಿ ಹಣ ಈ ಬಾರಿ ಸಾಲ ಮನ್ನಾವಾಗಿದೆ. ಮುಂದಿನ ದಿನಗಳಲ್ಲಿ ಕಣತೂರು ಗ್ರಾಮದ ಎಲ್ಲ ರೈತರಿಗೂ ಸಾಲವನ್ನು ನೀಡಲಾಗುವುದು. ಈ ದೇಶದಲ್ಲಿ ಕಡಿಮೆ ಭೂಮಿ ಹೊಂದಿರುವ ರೈತರೆ ಹೆಚ್ಚು. ಇವರಿಗೆ ಸರ್ಕಾರ ಏನೂ ಕೊಟ್ಟರೂ ಕಡಿಮೆಯೆ. ಸಂಘದಿಂದ ಜಾತಿ, ಪಕ್ಷಭೇದ ಎಣಿಸದೆ ಎಲ್ಲರಿಗೂ ಸಮಾನವಾಗಿ ಸಾಲ ನೀಡಲಾಗುತ್ತಿದೆ.
ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಬಿ.ಎಸ್.ದೇವರಾಜು ಮಾತನಾಡಿ, ‘ರೈತರಿಗೆ ಸಾಲ ನೀಡುವ ಮತ್ತು ಸಾಲಮನ್ನಾದ ವಿಚಾರದಲ್ಲಿ ತುಮಕೂರು ಎರಡನೇ ಸ್ಥಾನದಲ್ಲಿದೆ. ಕಣತೂರು ಸಂಘಕ್ಕೆ ಸುಮಾರು 600 ರೈತರ ಸಾಲದ ಅರ್ಜಿಗಳು ಬಂದಿವೆ. ಅವುಗಳನ್ನು ಜಿಲ್ಲಾ ಕಚೇರಿಗೆ ತಲುಪಿಸಬೇಕು. ಆದರೆ ಕಾರ್ಯದರ್ಶಿ ಎರಡು ವಾರದಿಂದ ಸಂಘದ ಕಚೇರಿಗೆ ಬೀಗ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ದೂರಿದರು.
ಇದೇ ವೇಳೆ ಸಂಘದ ನಿರ್ದೇಶಕರು, ಗ್ರಾಮಸ್ಥರು, ಮುಖಂಡರಿಂದ ಕೆ.ಎನ್.ರಾಜಣ್ಣ ಮತ್ತು ಬಿಎಸ್.ದೇವರಾಜ್ ಅವರಿಗೆ ಮೈಸೂರು ಪೇಟ ತೋಡಿಸಿ ಸನ್ಮಾನಿಸಿದರು. ಬೆಸ್ಕಾಂ ನಿರ್ದೇಶಕ ಬಿ.ಎಸ್.ವಸಂತ್ ಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೊಳಾಲ್ ನಾಗರಾಜು, ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಚೌದ್ರಿರಂಗಪ್ಪ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಹುಲಿಕಲ್ ಜಗದೀಶ್, ನಾಗೇಶ್, ಮಂಜಣ್ಣ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.