ADVERTISEMENT

ವಾಸ ಇಲ್ಲದವರ ಪತ್ತೆಗೆ ಸೂಚನೆ

ನಗರದ ವಿವಿಧ ಮತಗಟ್ಟೆ ವ್ಯಾಪ್ತಿಯಲ್ಲಿ ದಿನಪೂರ್ತಿ ನಡೆದ ಮತದಾರರ ಮಿಂಚಿನ ನೋಂದಣಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 12:11 IST
Last Updated 9 ಏಪ್ರಿಲ್ 2018, 12:11 IST
ಎಸ್ಐಟಿ ಕಾಲೇಜು ಮುಖ್ಯ ರಸ್ತೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರು ಮತದಾರರ ಪಟ್ಟಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಇದ್ದರು
ಎಸ್ಐಟಿ ಕಾಲೇಜು ಮುಖ್ಯ ರಸ್ತೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರು ಮತದಾರರ ಪಟ್ಟಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಇದ್ದರು   

ತುಮಕೂರು: ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಆದರೆ ಆ ಮತಗಟ್ಟೆ ವ್ಯಾಪ್ತಿಯಲ್ಲಿ ವಾಸ ಇಲ್ಲದವರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಹೆಸರು ಕೈ ಬಿಡಬೇಕು ಹಾಗೂ ಹೊಸ ಮತದಾರರನ್ನು ನೋಂದಣಿ ಮಾಡಬೇಕು ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‌ರಾಜ್ ಸೂಚಿಸಿದರು.

ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ‘ಮಿಂಚಿನ ನೋಂದಣಿ’ ಕಾರ್ಯಕ್ರಮದಡಿ ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಸಂಬಂಧಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿ ವಾಸ ಇರದವರನ್ನು ಪತ್ತೆ ಹಚ್ಚಲು ಮತಗಟ್ಟೆ ಮಟ್ಟದ ಅಧಿಕಾರಿಯೊಂದಿಗೆ ಆಹಾರ ಇಲಾಖೆಯ ಒಬ್ಬ ಸಿಬ್ಬಂದಿ, ಪಾಲಿಕೆಯ ವಾಟರ್ ಮನ್‌ ಗಳನ್ನು ನಿಯೋಜಿಸಲಾಗಿದೆ. ನಿಯೋಜಿತರು 3 ದಿನಗಳ ಒಳಗೆ ಅನರ್ಹರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಕೈ ಬಿಡಬೇಕು ಎಂದು ತಾಕೀತು’ ಮಾಡಿದರು.

ADVERTISEMENT

’ಅಲೆಮಾರಿ, ಅರೆ ಅಲೆಮಾರಿ, ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಹೊಸದಾಗಿ ಸೇರ್ಪಡೆ ಮಾಡಬೇಕಾಗಿರುವ ಮತದಾರರು ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ’ ಎಂದು ಹೇಳಿದರು.ಮತದಾರರ ಪಟ್ಟಿ ಸೇರ್ಪಡೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯಬೇಕು ಎಂದು ಸಿಬ್ಬಂದಿಗೆ ಆದೇಶಿಸಿದರು.

ಮತಗಟ್ಟೆ ಸಂಖ್ಯೆ 103 (ನಜರಾಬಾದ್ ಸರ್ಕಾರಿ ಮಾದರಿ ಪಾಠ ಶಾಲೆ), 183 (ಸರ್ಕಾರಿ ಉರ್ದು ಹಿರಿಯ ಶಾಲೆ), 188 ಕ್ಕೆ (ಎಸ್‌ಐಟಿ ಕಾಲೇಜು ಮುಖ್ಯ ರಸ್ತೆ) ಜಿಲ್ಲಾ ಚುನಾವಣಾಧಿಕಾರಿ ಭೇಟಿ ನೀಡಿದರು.ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.