ADVERTISEMENT

ಶಾಸಕರಿಗೆ ಮಾಧುಸ್ವಾಮಿ ಸವಾಲು

ಹೇಮಾವತಿ ನಾಲಾ ಯೋಜನೆಗೆ ಜಮೀನು ಕೊಟ್ಟ ರೈತರಿಗೆ ಪರಿಹಾರ ಕೊಡಿಸಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 4:47 IST
Last Updated 15 ಏಪ್ರಿಲ್ 2017, 4:47 IST

ಚಿಕ್ಕನಾಯಕನಹಳ್ಳಿ: ‘ಮಾನ, ಮರ್ಯಾದೆ ಇದ್ದರೆ ಹೇಮಾವತಿ ನಾಲಾ ಯೋಜನೆಗೆ ಜಮೀನು ಬಿಟ್ಟು ಕೊಟ್ಟಿರುವ ರೈತರಿಗೆ ಪರಿಹಾರ ಕೊಡಿಸಿ. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ’ ಎಂದು ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ ಅವರು ಶಾಸಕ ಸಿ.ಬಿ.ಸುರೇಶ್‌ಬಾಬು ಅವರಿಗೆ ಸವಾಲು ಹಾಕಿದ್ದಾರೆ.

ತಾಲ್ಲೂಕಿನಲ್ಲಿ ಈಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ‘ಡ್ಯಾನ್ಸ್, ರಸಮಂಜರಿ, ಕಲ್ಯಾಣೋತ್ಸವ ಮುಂತಾದ ಆಡಂಬರದ ಕಾರ್ಯಕ್ರಮ ಆಯೋಜಿಸಿ ಜನರ ಭಾವನೆ ಕೆರಳಿಸಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ’ ಎಂದು ಟೀಕಿಸಿದರು.

‘ಶಾಸಕರ 10 ವರ್ಷದ ಆಡಳಿತಾವಧಿಯಲ್ಲಿ ತಾಲ್ಲೂಕಿನ ಅಭಿವೃದ್ಧಿ ಮರೀಚಿಕೆಯಾಗಿದೆ. ಸಾರ್ವಜನಿಕರಿಗೆ ಉಪಯುಕ್ತವಾಗುವ ಕಾಮಗಾರಿಗಳಿಗೆ ಬಳಸಬೇಕಿದ್ದ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯನ್ನು ಪೊಲೀಸ್‌ ಇಲಾಖೆಗೆ ಜೀಪ್ ನೀಡಲು, ಭವನ ಕಟ್ಟಿಸಿಕೊಳ್ಳಲು ನೀಡಿದ್ದಾರೆ’ ಎಂದು ಆರೋಪಿಸಿದರು.

‘ಕಾರ್ಯಕರ್ತರು ಪರಸ್ಪರ ಮುನಿಸು ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗೋಣ’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿಗಣೇಶ್ ಮಾತನಾಡಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಹೆಬ್ಬಾಕ ರವಿ, ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್ ಶಶಿಧರ್, ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ನಿರಂಜನಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹಾಲಿಂಗಪ್ಪ, ಮಂಜುಳಮ್ಮ, ಲೋಹಿತಾಬಾಯಿ, ಪುರಸಭೆ ಸದಸ್ಯ ಸಿ.ಎಂ.ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೇಶವಮೂರ್ತಿ, ಇಂದಿರಾಕುಮಾರ್, ಶೈಲಾ ಶಶಿಧರ್, ತುಮುಲ್ ನಿರ್ದೇಶಕ ಶಿವನಂಜಪ್ಪ ಹಳೆಮನೆ ಇದ್ದರು.

*
ಬರ ಪರಿಸ್ಥಿತಿ ನಿಭಾಯಿಸುವುದಲ್ಲಿ ತಾಲ್ಲೂಕು ಶಾಸಕರು ವಿಫಲವಾಗಿದ್ದಾರೆ. ಈ ವೈಫಲ್ಯದ ವಿರುದ್ಧ ಹೋರಾಟ ರೂಪಿಸುತ್ತೇನೆ.’
-ಜೆ.ಸಿ.ಮಾಧುಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT