ADVERTISEMENT

30ರೊಳಗೆ ರಾಜಕೀಯ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:27 IST
Last Updated 4 ಡಿಸೆಂಬರ್ 2017, 5:27 IST

ತುಮಕೂರು: ಮುಖಂಡ ರಾಯಸಂದ್ರ ರವಿಕುಮಾರ್ ಅವರು ಭಾನುವಾರ ನಗರದಲ್ಲಿ ಹಿತೈಷಿಗಳ ಸಭೆ ನಡೆಸಿದರು. ಮುಂದಿನ ವಿಧಾನಸಭೆಗೆ ಸ್ಪರ್ಧಿಸಲು ಬಿ ಫಾರಂ ನೀಡುವ ಅಥವಾ ಉನ್ನತ ಜವಾಬ್ದಾರಿ ನೀಡುವ ಪಕ್ಷಕ್ಕೆ ಡಿಸೆಂಬರ್ 30ರೊಳಗೆ ಸೇರುವಂತೆ ಹಿತೈಷಿಗಳು ಸಲಹೆ ನೀಡಿದರು. ’

ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆ ನಡೆಸಬೇಕು. ತಾವು ಸೇರುವ ಪಕ್ಷದಲ್ಲಿ ನಿಮ್ಮ ಬೆಂಬಲಿಗರಿಗೆ ರಾಜಕೀಯ ಅಧಿಕಾರ, ಸ್ಥಾನಮಾನ ಕಲ್ಪಿಸಬೇಕು’ ಎಂದು ಹೇಳಿದರು. ಸಭೆಯಲ್ಲಿ ಮಾತನಾಡಿದ ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿಮಠದ ಬಸವ ಮಹಾಲಿಂಗ ಸ್ವಾಮೀಜಿ ಮಾತನಾಡಿ, ‘ರವಿಕುಮಾರ್ ಅವರು ಶುದ್ಧ ನಡತೆ, ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಸಮಾಜದ ಉನ್ನತಿಗೆ ಇಂತಹವರು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಪ್ರೋತ್ಸಾಹಿಸಬೇಕು’ ಎಂದು ನುಡಿದರು.

ಕಡಬ ಗ್ರಾಮ ಪಂಚಾಯಿತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ’ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯುಳ್ಳ ರವಿಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರಬೇಕು’ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಪ್ರಾಂಶುಪಾಲ ಡಾ.ಗಿರಿಧರ್ ಮಾತನಾಡಿದರು.

ADVERTISEMENT

ರವಿಕುಮಾರ್ ಮಾತನಾಡಿ, ‘ ಕಾಂಗ್ರೆಸ್, ಜೆಡಿಎಸ್, ಜೆಡಿಯು(ಶರದ್ ಯಾದವ್ ಬಣ) ಮುಖಂಡರು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಸಂಘ ಪರಿವಾರದವರು ಬಿಜೆಪಿ ತೊರೆಯದಂತೆ ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಡಿ.30ರೊಳಗೆ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರ ಸೂಚನೆ ಮೇರೆಗೆ ಸಭೆಗೆ ಬಂದಿದ್ದ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೊ ರಾಜು ಅವರು ರವಿಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು.

ಡಾ.ಗಿರಿಧರ್, ಅರಕೆರೆ ಚಂದ್ರಯ್ಯ, ಹಡವನಹಳ್ಳಿ ವೆಂಕಟೇಶ್, ಸಾಸಲು ಪ್ರಕಾಶ್, ಡಿ.ಕೆ.ವಿದ್ಯಾನಂದ್, ದಲಿತ ಮುಖಂಡ ಭಾನುಪ್ರಕಾಶ್, ಶಿವಾಜಿ, ತಳವಾರನಹಳ್ಳಿ ವಿಜಯ್‌ಕುಮಾರ್, ದೊಂಬರನಹಳ್ಳಿ ಕಾಂತರಾಜು, ಗುತ್ತಿಗೆದಾರ ಚಂದ್ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.