ADVERTISEMENT

ಅಕ್ರಮ ಮದ್ಯ: ಕ್ರಮಕ್ಕೆ ಸೂಚನೆ

ಉಡುಪಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 7:08 IST
Last Updated 30 ಜುಲೈ 2015, 7:08 IST

ಉಡುಪಿ: ಅಕ್ರಮ ಮದ್ಯ ಮಾರಾಟ ಹಾಗೂ ಅವಧಿ ಮೀರಿದ ನಂತರವೂ ವಹಿವಾಟು ನಡೆಸುವ ಮದ್ಯದಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಆರ್‌. ವಿಶಾಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಡಿಸಿ ಮನ್ನಾ ಭೂಮಿ ವಿತರಣೆ, ಒತ್ತುವರಿ ತೆರವಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಉಡುಪಿ ನಗರದ ಜಿಲ್ಲಾ ಅಂಬೇಡ್ಕರ್‌ ಭವನದ ಅಭಿವೃದ್ಧಿಗೆ ₨ 22 ಲಕ್ಷದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಭವನದ ಅಕ್ಕಪಕ್ಕ ಇರುವ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಭವನದ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ. ನಿರ್ವ­­ಹಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಯೋಜನೆಗಳ ಲಾಭ ಪಡೆದು ಅಭಿವೃದ್ಧಿ ಹೊಂದಲು ಸಮುದಾಯ­ದವರೇ ಮುಂದೆ ಬರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ನೀಡಲಾಗುತ್ತಿದ್ದು, ಪರಿಶಿಷ್ಟ ಜಾತಿಯ­ವರಿಗೆ ಇನ್ನೂ ನಾಲ್ಕು ಹಾಗೂ ಪಂಗಡದ­ವರಿಗೆ 2 ಟ್ಯಾಕ್ಸಿ ನೀಡಲು ಅವಕಾಶವಿದೆ. ವಾಹನ ಚಾಲನಾ ತರಬೇತಿಯನ್ನೂ ಆಯೋಜಿಸಲಾಗುವುದು ಎಂದರು. ಬಸ್‌ ಹಾಗೂ ಟ್ಯಾಕ್ಸಿ ನಿಲ್ದಾಣಗಳಲ್ಲಿ ದಲಿತ ಚಾಲಕರಿಗೆ ಅವಕಾಶ ನೀಡುತ್ತಿಲ್ಲ ಎಂದು ಜಯನ್‌ ಮಲ್ಪೆ ಹಾಗೂ ಶ್ಯಾಮ್‌ರಾಜ್‌ ಬಿರ್ತಿ ಗಮನ ಸೆಳೆದರು. ಈ ಬಗ್ಗೆ ಕ್ರಮ ಕೈಗೊಂಡು ವರದಿ ನೀಡಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ತಾಕೀತು ಮಾಡಿದರು.

ಸರ್ಕಾರಿ ಅಭಿಯೋಜಕ ಜಿತೂರಿ ಅವರು, ದಲಿತ ದೌರ್ಜನ್ಯ ಪ್ರಕರಣಗಳು, ಬಿ ವರದಿ ಸಲ್ಲಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ದಲಿತರ ರಕ್ಷಣೆಗೆ ಇರುವ ಕಾನೂನು­ಗಳು ಬದಲಾಗಲಿದ್ದು ಇನ್ನಷ್ಟು ಸುಧಾರಣೆ ಆಗಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿ­ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ ಇದ್ದರು.

ಡಿಸಿ ವಿಶಾಲ್‌ ಕಾರ್ಯವೈಖರಿಗೆ ಮೆಚ್ಚುಗೆ
ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್‌ ಅವರು ಕಾರ್ಯ ಶೈಲಿಯ ಬಗ್ಗೆ ದಲಿತ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು. ವಸತಿ ಹಾಗೂ ಹಕ್ಕು ಪತ್ರ ನೀಡುವಿಕೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೊರಗ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಆಯೋಜನೆ ಮಾಡಿದ್ದರಿಂದ ಫಲಿತಾಂಶ ಹೆಚ್ಚಾಗಿದೆ. ಅಂಬುಲೆನ್ಸ್ ನೀಡಿರುವುದರಿಂದ ಅನುಕೂಲವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT