ADVERTISEMENT

ಅಭಿವೃದ್ಧಿ ಪರ ಜನರ ಮತ

ಉಪ ಚುನಾವಣೆ ಫಲಿತಾಂಶ– ಮಧ್ವರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:52 IST
Last Updated 14 ಏಪ್ರಿಲ್ 2017, 5:52 IST

ಉಡುಪಿ: ‘ಜನರು ಅಭಿವೃದ್ಧಿ ಪರ ಇದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕೆಲಸಗಳನ್ನು ಮೆಚ್ಚಿ ದ್ದಾರೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾಡು ವ ವೃಥಾ ಆರೋಪಗಳನ್ನು ಯಾರೂ ನಂಬುವುದಿಲ್ಲ ಎಂಬುದನ್ನು ನಂಜನ ಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶ ಸಾಬೀತು ಮಾಡಿದೆ’ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉಪ ಚುನಾವಣೆ ನಡೆದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಸುಮಾರು ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳಾಗಿವೆ. ರಾಜ್ಯದಲ್ಲಿಯೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಜನರು ಪ್ರಗತಿಯ ಪರ ನಿಲ್ಲುತ್ತಾರೆ’ ಎಂಬುದು ಇದರಿಂದ ಸ್ಪಷ್ಟವಾಗಿದೆ.

‘ಅಲ್ಲದೆ ಸರ್ಕಾರದ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲ. ಬೆಂಗಳೂರಿನ ಉಕ್ಕಿನ ಸೇತುವೆ ಯೋಜನೆಯಲ್ಲಿ ಲಂಚ ಪಡೆಯಲಾಗಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡಿದವು, ಆದ್ದರಿಂದ ಆ ಯೋಜನೆಯನ್ನೇ ಕೈಬಿಡಲಾಯಿತು. ಲಂಚ ಪಡೆದಿದ್ದರೆ ಯೋಜನೆ ಕೈಬಿಡಲು ಸಾಧ್ಯವಾಗುತ್ತಿತ್ತೇ’ ಎಂದು ಅವರು ಪ್ರಶ್ನಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಒಂದು ತಿಂಗಳ ಮೊದಲೇ ಎರಡೂ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ನಾವು ಪ್ರಚಾರಕ್ಕೆ ಹೋಗಿದ್ದೇ ಏಪ್ರಿಲ್ 1ರ ನಂತರ. ಆದರೂ ಜನರು ನಮ್ಮ ಪರ ನಿಂತಿದ್ದಾರೆ’ ಎಂದರು.

ಹಣದ ಬಲದಿಂದ ಚುನಾವಣೆ ಗೆದ್ದಿರುವ ಬಗ್ಗೆ ಜಗದೀಶ್ ಶೆಟ್ಟರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಈಗ ನಾವು ಗೆದ್ದಿರುವುದಕ್ಕೆ ಆರೋಪ ಮಾಡುತ್ತಿದ್ದಾರೆ. ಅವರೇ ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದರೆ ಏನು ಹೇಳುತ್ತಿದ್ದರು’ ಎಂದರು.

‘ನಾನು ₹10 ಕೋಟಿ ನೀಡಿ ಮಂತ್ರಿಯಾಗಿದ್ದೇನೆ ಎಂದು ವಿ. ಶ್ರೀನಿವಾಸ ಪ್ರಸಾದ್ ಆರೋಪ ಮಾಡಿದ್ದರು. ಅವರು ಸೋತಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ನಾನು ಲಘುವಾಗಿ ಮಾತನಾಡುವುದಿಲ್ಲ. ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದರು’ ಎಂದರು.

*
ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಗೆಲ್ಲಲು ಯಡಿಯೂರಪ್ಪ ಶತಾಯಗತಾಯ ಪ್ರಯತ್ನಿಸಿದರೂ ಎರಡೂ ಕಡೆ ಸೋತಿದ್ದಾರೆ.
–ಪ್ರಮೋದ್ ಮಧ್ವರಾಜ್, ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.