ADVERTISEMENT

ಉತ್ತಮ ಶಿಕ್ಷಣದಿಂದ ಒಳ್ಳೆಯ ನಾಗರಿಕರಾಗಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:15 IST
Last Updated 15 ಜುಲೈ 2017, 6:15 IST

ಉಡುಪಿ: ‘ವಿದ್ಯಾರ್ಥಿಗಳು ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡುವ ಮೂಲಕ ಶಾಲೆಗೂ ಹೆತ್ತವರಿಗೂ ಕೀರ್ತಿ ತರಬೇಕು. ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಬಾಳಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹಾಗೂ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ ಹೇಳಿದರು.

ವಳಕಾಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ತುಂಬಾ ಕಷ್ಟವಿತ್ತು. ಹೆತ್ತವರು ಸಹ ಮಕ್ಕಳನ್ನು ಕೃಷಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು. ಕೃಷಿ, ಮನೆಯ ಕೆಲಸ ಮಾಡಿ ಶಾಲೆಗೂ ಹೋಗಬೇಕಾಗಿತ್ತು. ಅಂತಹ ಕಷ್ಟದ ಕಾಲದಲ್ಲಿಯೂ ಶ್ರದ್ಧೆಯಿಂದ ಕಲಿತು ದೊಡ್ಡ ಮಟ್ಟದ ಸಾಧನೆ ಮಾಡಿರುವ ಉದಾಹರಣೆಗಳಿವೆ’ ಎಂದರು.

ADVERTISEMENT

‘ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಸಹ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳು ಇದನ್ನು ಬಳಸಿಕೊಳ್ಳಬೇಕು’ ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 20 ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ರಾಮಾಯಣ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರಜತ ಪದಕ ಪಡೆದ ವಸುಧಾ ಕಾಮತ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಚಿತ್ರ ಬರೆದುಕೊಟ್ಟ ದಿಶಾ ಡಿ ಆಚಾರ್ಯ ಅವರನ್ನು ಗೌರವಿಸಲಾಯಿತು.

ಕೆನರಾ ಬ್ಯಾಂಕಿನ ಉಡುಪಿ ಶಾಖೆಯ ವ್ಯವಸ್ಥಾಪಕ ವಿನಯ ಕುಮಾರ್, ಉಡುಪಿ ತಾಲ್ಲೂಕು ಇಂಡಸ್ಟ್ರಿಯಲ್ ಕೋ– ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯ ಅಧಿಕಾರಿ ಐ.ಎಫ್ ಮಾಗಿ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಸುಬ್ರಹ್ಮಣ್ಯ ಭಟ್‌, ಮಣಿಪಾಲದ ಮಹಾಮಾಯಾ ಪ್ರತಿಷ್ಠಾನದ ನಿರ್ದೇಶಕಿ ಉಷಾ ಎಸ್‌ ಪೈ, ಮಣಿಪಾಲ್ ಕಂಪ್ಯೂಟರ್ ಎಜುಕೇಷನ್‌ನ ನಿರ್ದೇಶಕಿ ಗಾಯತ್ರಿ ಉಪಾಧ್ಯಾಯ, ಪ್ರೌಢಶಾಲೆಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ (ಎಸ್‌ಡಿಎಂಸಿ) ಉಪಾಧ್ಯಕ್ಷೆ ಇಂದು ರಮಾನಂದ ಭಟ್‌, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಯ ಉಪಾಧ್ಯಕ್ಷ ನಾಗಭೂಷಣ ಶೇಟ್, ಉಡುಪಿ ನಗರಸಭೆ ಸದಸ್ಯೆ ಗೀತಾ ರವಿಶೇಟ್, ಶಾಲಾ ಮುಖ್ಯಗುರು ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿನಿ ಪ್ರತೀಕ್ಷಾ,  ವಿದ್ಯಾರ್ಥಿ ನಚಿಕೇತ, ವಿಸ್ಮಯ ಹಾಗೂ ಶಿಕ್ಷಕಿಯರಾದ ಬಾಬಿ, ರಂಜನಿ , ಹಿರಿಯ ಶಿಕ್ಷಕಿ ಸುಗುಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.