ಉಡುಪಿ:ಕ್ರೀಡಾ ಕೂಟಗಳು ವೈದ್ಯರ ವೃತ್ತಿ ಬದುಕಿನ ಒತ್ತಡ ನಿವಾರಣೆಗೆ ಸಹಾಯಕ. ಜತೆಗೆ ಜೀವನದಲ್ಲಿ ಹೊಸ ಹುರುಪು ಮೂಡಿಸುತ್ತದೆ ಎಂದು ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ಹೇಳಿದರು.
ಜಿಲ್ಲಾ ಕ್ರಿಕೆಟ್ ಸಂಸ್ಥೆ, ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ವೈದ್ಯರುಗಳ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ‘ಸಿಲ್ವರ್ ಕ್ರಿಕೆಟ್ ಲೀಗ್ –2018’ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆ ಸ್ಪಂದಿಸದೆ ರೋಗಿ ಮೃತಪಟ್ಟಾಗ, ಪ್ರಾಮಾಣಿಕವಾಗಿ ಚಿಕಿತ್ಸೆ ನೀಡಿದ ವೈದ್ಯರನ್ನು ಸಾವಿಗೆ ಹೊಣೆಗಾರರನ್ನಾಗಿ ಮಾಡಿ, ಹಲ್ಲೆ ನಡೆಸುವ ಘಟನೆ ಹೆಚ್ಚುತ್ತಿವೆ. ಇಂತಹ ಘಟನೆಗಳು ವೈದ್ಯರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಿವೆ.ಇಂತಹ ಭಯದ ವಾತಾವರಣದಲ್ಲಿ ಕೆಲಸ ಮಾಡುವ ವೈದ್ಯರಿಗೆ ಕ್ರೀಡಾಕೂಟವೂ ನಿರಾಳತೆ ಒದಗಿಸಬಲ್ಲದು ಎಂದರು.
ನವೀನ್ ಪಾಟೀಲ್, ಮೆಡಿಲ್ಯಾಬ್ ಸಂಸ್ಥೆಯ ಆಡಳಿತ ನಿರ್ದೇಶಕ ಜ್ಯೋತಿಪ್ರಸಾದ್ ಹೆಗ್ಡೆ ಇದ್ದರು. ಮಾಹೆ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಸ್ವಾಗತಿಸಿದರು, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ವಂದಿಸಿದರು. ಡಾ. ಅಜಯ್ ಕಾರ್ಯಕ್ರಮ ನಿರ್ವಹಿಸಿದರು.
ದಿನದ ಮೊದಲ ಕ್ರಿಕೆಟ್ ಟೂರ್ನಿಯಲ್ಲಿ ದಾವಣಗೆರೆ ಬ್ಲೆಂಡೆಡ್ ಕನ್ನಡಿಗಾಸ್ ತಂಡವು ಕ್ಯಾಲಿಕಟ್ ಹರಿಕೇನ್ ತಂಡದ ವಿರುದ್ಧ 5 ವಿಕೆಟ್ ವಿಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕ್ಯಾಲಿಕಟ್ ತಂಡವು ರಾಕೇಶ್ 38, ಸುಧೀರ್ 16 ರನ್ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 117 ರನ್ ಪೇರಿಸಿತು. ದಾವಣಗೆರೆ ತಂಡದ ರಾಕೇಶ್ 23 ರನ್ ನೀಡಿ 3 ವಿಕೆಟ್ ಪಡೆದರು. ಆದರ್ಶ 16 ರನ್ಗಳಿಗೆ ಎರಡು ವಿಕೆಟ್ ದಾಖಲಿಸಿದರು.
ದಾವಣಗೆರೆ ಬ್ಲೆಂಡೆಡ್ ಕನ್ನಡಿಗ ತಂಡದ ಆದರ್ಶ 57, ರಾಮಾಜ್ 20 ರನ್ಗಳನ್ನು ಬ್ಯಾಟಿಂಗ್ ನೆರವಿನಿಂದ 3 ಚೆಂಡುಗಳು ಬಾಕಿ ಇರುವಾಗಲೇ 5 ವಿಕೆಟ್ ಅಂತರದ ಜಯ ಸಾಧಿಸಿತು. ಕ್ಯಾಲಿಕಟ್ ತಂಡದ ಪರವಾಗಿ ವಿನೀತ್ 24 ರನ್ ನೀಡಿ ಎರಡು ವಿಕೆಟ್ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.