ಬ್ರಹ್ಮಾವರ: ಉತ್ತಮ ಸಮಾಜ ನಿರ್ಮಾಣಕ್ಕೆ ಓದು ಪೂರಕ. ಓದಿ ತಿಳಿವಳಿಕೆ ಹೊಂದಿರುವವರು ಸಾಮಾ ಜಿಕ ಗಲಭೆಗಳಲ್ಲಿ ಪಾಲ್ಗೊಂಡ ನಿದರ್ಶನ ಗಳಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬ್ರಹ್ಮಾವರದ ಹಂದಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ಉಡುಪಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗೆ ಸೇವಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಓದುವಿಕೆ ನಮ್ಮ ಜ್ಞಾನವನ್ನು ಹೆಚ್ಚಿಸು ವುದಲ್ಲದೆ, ವ್ಯಕ್ತಿತ್ವ ಬದಲಾವಣೆಗೆ ಕಾರಣವಾಗುತ್ತದೆ ಎಂದ ಅವರು, ಉತ್ತಮ ಸಾಮಾಜಿಕ ವ್ಯವಸ್ಥೆಗೂ ಓದು ಕಾರಣವಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ‘ಓದು ಪ್ರತಿಯೊಬ್ಬರಿಗೂ ಪ್ರವೃತ್ತಿಯಾಗಿರ ಬೇಕು. ಓದುವಿಕೆ ನಮ್ಮ ವ್ಯಕ್ತಿತ್ವ ಗಟ್ಟಿಗೊ ಳಿಸಲು ಪೂರಕ’ ಎಂದು ಹೇಳಿದರು.
ಸಾಹಿತಿ ವಸಂತಿ ಶೆಟ್ಟಿ, ಓದುವಿಕೆಯ ಅನುಭವವನ್ನು, ಗ್ರಂಥಾಲಯಗಳಿಂದ ಜನಸಾಮಾನ್ಯರಿಗೆ ಆಗುವ ಅನುಕೂ ಲತೆಯ ಬಗ್ಗೆ ಮಾಹಿತಿ ನೀಡಿದರು.
ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಮಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಾರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ರಾಜೇಶ್ ಶೆಟ್ಟಿ ಬಿರ್ತಿ, ಮಹೇಂದ್ರ ಕುಮಾರ್, ಶೋಭಾ ಉಪಸ್ಥಿತರಿದ್ದರು. ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ಜಗದೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಬ್ರಹ್ಮಾವರದ ಎಸ್.ಎಂ.ಎಸ್ ವಿದ್ಯಾರ್ಥಿಗಳಿಂದ ‘ಓದಿನೆಡೆಗೆ ನಮ್ಮ ನಡಿಗೆ’ ಜಾಥಾ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಚಾಲನೆ ನೀಡಿ, ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು. ಪುಸ್ತಕ ಓದಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಚಂದ್ರಶೇಖರ ಕೆದ್ಲಾಯ ಅವರಿಂದ ಕನ್ನಡ ಗೀತೆಗಳ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.