ADVERTISEMENT

‘ಕಂಬಳಕ್ಕಾಗಿ ಕರವೇ ಹೋರಾಟ’

ಹೆಬ್ರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 10:46 IST
Last Updated 30 ನವೆಂಬರ್ 2017, 10:46 IST
ಹೆಬ್ರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಹೆಬ್ರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.   

ಹೆಬ್ರಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶೀಘ್ರವಾಗಿ ಹೋರಾಟ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದರು.

ಹೆಬ್ರಿಯ ಬಸ್ ನಿಲ್ದಾಣದ ಬಳಿ ದಿ.ಪ್ರಸನ್ನ ಬಲ್ಲಾಳ್ ವೇದಿಕೆಯಲ್ಲಿ ಕರ್ನಾ ಟಕ ರಕ್ಷಣಾ ವೇದಿಕೆ ಪುನರ್‌ರಚಿತ ಹೆಬ್ರಿ ತಾಲ್ಲೂಕು ಘಟಕದ ವತಿಯಿಂದ ಶನಿವಾರ ನಡೆದ ಕರ್ನಾಟಕ ರಾಜ್ಯೋ ತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಕನ್ನಡ ಮಣ್ಣಿನ ಮಕ್ಕಳಿಗೆ ರಾಜ್ಯದಲ್ಲಿ ಉದ್ಯೋಗ ದೊರಕಬೇಕು. ಕನ್ನಡ ಮತ್ತು ನಾಡಿನ ಹೋರಾಟಕ್ಕಾಗಿ ನಮ್ಮ ಮೇಲೆ ಯಾವೂ ಕೇಸು ದಾಖಲಾದರೂ ಭಯವಿಲ್ಲ. ಕಂಬಳದ ಉಳಿವಿಗಾಗಿಯೂ ಕರವೇ ಹೋರಾಟ ನಡೆಸಲಿದೆ’ ಎಂದರು.

ADVERTISEMENT

‘ಗ್ರಾಮೀಣ ಪ್ರದೇಶವಾಗಿದ್ದ ಹೆಬ್ರಿ ಇದೀಗ ನೂತನ ತಾಲ್ಲೂಕು ಆಗಿದೆ. ನಮ್ಮೆಲ್ಲರಿಗೂ ಹೊಣೆಗಾರಿಕೆ ಹೆಚ್ಚಾಗಿದೆ. ಅದಕ್ಕಾಗಿ ಸಮಾಜಮುಖಿ ಕೆಲಸಗಳನ್ನು ಮಾಡುವ ಜನಸೇವಾ ಸಂಘ ಸಂಸ್ಥೆಗಳಿಗೆ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ನಿರಂತರ ಬೆಂಬಲ ನೀಡಲಾಗುವುದು’ ಎಂದು ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿ ಪ್ರದೇಶ ಮತ್ತು ವಿದೇಶಗಳಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ನಡೆಸಬೇಕು. ಆ ಮೂಲಕ ಕನ್ನಡಿಗರು ಎಲ್ಲಿದ್ದರೂ ನಾವು ಅವರೊಂದಿಗೆ ಇದ್ದೇವೆ ಎಂದು ತೋರಿಸಬೇಕು ಎಂದು ಉದ್ಯಮಿ ಎಚ್. ಸತೀಶ ಪೈ ಹೇಳಿದರು.

ವೇದಿಕೆಯ ಸ್ಥಳೀಯ ಘಟಕದ ಅಧ್ಯಕ್ಷ ರವಿ ಶೆಟ್ಟಿ ಹೊಸೂರು ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿಯಲ್ಲಿ ನಿರಂತರವಾಗಿ ಯುವಕರ ತಂಡದೊಂದಿಗೆ ಕನ್ನಡದ ಸೇವೆ ಮಾಡುವ ಮೂಲಕ ರಾಜ್ಯೋತ್ಸವವನ್ನು ನಡೆಸುವ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಸೀತಾನದಿ ವಿಠ್ಠಲ ಶೆಟ್ಟಿ, ಹೆಬ್ರಿ ಚೈತನ್ಯ ಯುವ ವೃಂದವನ್ನು ಅಭಿನಂದಿಸಲಾಯಿತು. ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ಕರವೇ ಕಾಪು ಘಟಕದ ಅಧ್ಯಕ್ಷ ಮಹಮ್ಮದ್ ಅಸೀಫ್ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಹೆಬ್ರಿ ಪಂಚಾಯಿತಿ ಅಧ್ಯಕ್ಷ ಎಚ್. ಸುಧಾಕರ ಹೆಗ್ಡೆ, ಉದ್ಯಮಿ ಎಚ್. ಪ್ರವೀಣ್ ಬಲ್ಲಾಳ್, ಬೆಳ್ವೆ ಗಣೇಶ್ ಕಿಣಿ, ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಮರಕಾಲ, ವೇದಿಕೆ ರಾಜ್ಯ ಸಂಚಾಲಕ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಸೀತಾನದಿ ವಿಜೇಂದ್ರ ಶೆಟ್ಟಿ, ಕಾರ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ನಿತೀಶ್ ಎಸ್ ಪಿ. ಕಾರ್ಯಕ್ರಮ ನಿರೂಪಿಸಿದರು. ಟಿ.ಜಿ.ಆಚಾರ್ಯ ಸ್ವಾಗತಿಸಿದರು. ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.