ಪಡುಬಿದ್ರಿ: ಜಮ್ಮುವಿನ ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪಡುಬಿದ್ರಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಗಮಿಸುವ ವೃತ್ತದ ಬಳಿ ಜಮಾಯಿಸಿದ ಸಾರ್ವಜನಿಕರು ಮೋಂಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಬಿತ್ತಿ ಫಲಕ ಪ್ರದರ್ಶಿಸಿಸಿ ಘೋಷಣೆ ಕೂಗಿದರು. ಅರಫಾ ಬಾಯ್ಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದರು.
ದಲಿತ ಮುಖಂಡ ಲೋಕೇಸ್ ಕಂಚಿನಡ್ಕ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗುತಿವೆ.ಆದರೆ, ಪ್ರಧಾನಿ ಬೇಟಿ ಬಚಾವ್ ಎಂದು ಹೇಳಿಕೊಂಡು ಇನ್ನೊಂದೆಡೆ ನಡೆಯುವ ಅತ್ಯಾಚಾರ ಬಗ್ಗೆ ಮಾತನಾಡುತಿಲ್ಲ. ಅತ್ಯಾಚಾರಿಗಳು ಯಾರೇ ಆಗಲಿ ಅವರನ್ನು ಗಲ್ಲಿಗೇರಿಸುವಂತಹ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಹಸನ್ಬಾವಾ, ಎಸ್ಡಿಪಿಐನ ಹನೀಫ್ ಮೂಳೂರು, ಫಿರೋಝ್ ಕಂಚಿನಡ್ಕ, ಆಸೀಫ್ ಆಪದ್ಬಾಂಧವ, ರಿಝ್ವಾನ್ ಕಂಚಿನಡ್ಕ, ನಿಝಾಮ್, ಶಫೀಕ್, ಕಮ್ರಾನ್, ತೌಫೀಕ್, ಅಮೀರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.