ADVERTISEMENT

ಪದವಿ ಕಾಲೇಜುಗಳ ಖಾಲಿ ಹುದ್ದೆ ಭರ್ತಿಗೆ ಸರ್ಕಾರದ ಅನುಮತಿ: ಉದಯ ಶಂಕರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 9:19 IST
Last Updated 5 ನವೆಂಬರ್ 2017, 9:19 IST
ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆ ತುಂಬಲು ಸರ್ಕಾರ ಅನುಮತಿ ನೀಡಿರುವ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸಭೆಯಲ್ಲಿ ಪ್ರಾಂಶುಪಾಲರು, ಅಧಿಕಾರಿಗಳು ಭಾಗವಹಿಸಿದ್ದರು.
ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆ ತುಂಬಲು ಸರ್ಕಾರ ಅನುಮತಿ ನೀಡಿರುವ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸಭೆಯಲ್ಲಿ ಪ್ರಾಂಶುಪಾಲರು, ಅಧಿಕಾರಿಗಳು ಭಾಗವಹಿಸಿದ್ದರು.   

ಉಡುಪಿ: ರಾಜ್ಯದ ಖಾಸಗಿ ಅನುದಾನಿತ ಕಾಲೇಜುಗಳು ಹಲವು ವರ್ಷಗಳಿಂದ ನಡೆಸಿದ ಸತತ ಪ್ರಯತ್ನದ ಫಲವಾಗಿ ಕಾಲೇಜುಗಳಲ್ಲಿ 2015 ಡಿಸೆಂಬರ್ 31ರ ವರೆಗೆ ತೆರವಾದ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಉದಯ ಶಂಕರ ಹೇಳಿದರು.

ಹುದ್ದೆ ಭರ್ತಿ ಕುರಿತು ಅಗತ್ಯ ಮಾಹಿತಿ ಮತ್ತು ಅನ್ವಯಿಸುವ ಷರತ್ತುಗಳ ಬಗ್ಗೆ ಚರ್ಚಿಸಲು ಕಾಲೇಜು ಶಿಕ್ಷಣ ಇಲಾಖೆಯು ಮಂಗಳೂರಿನ ಡಾ.ಪಿ. ದಯಾನಂದ ಪೈ ಹಾಗೂ ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಆಡಳಿತಮಂಡಳಿ ಪ್ರತಿನಿಧಿಗಳ ಮತ್ತು ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಆದೇಶ ಮತ್ತು ಕಾಲೇಜುಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದ ಅವರು, ಕಾಲೇಜುಗಳು ಪ್ರಸ್ತಾವನೆಯನ್ನು 2017 ನವೆಂಬರ್‌ 15ರೊಳಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ADVERTISEMENT

ಸಹಾಯಕ ನಿರ್ದೇಶಕ ಎಂ. ಬಾಲಸ್ವಾಮಿ ಹಾಗೂ ಕಚೇರಿಯ ವ್ಯವಸ್ಥಾಪಕ ಶ್ರೀಪತಿ ಎ ಉಡುಪ ಮಾತನಾಡಿ, ಹುದ್ದೆಗಳನ್ನು ತುಂಬಲು ಪ್ರಸ್ತಾವನೆಯನ್ನು ತಯಾರಿಸುವಾಗ ಗಮನಿಸಬೇಕಾದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಕಾರ್ಯದರ್ಶಿ ಪ್ರೊ. ವೈ. ಭಾಸ್ಕರ ಶೆಟ್ಟಿ ಶಿರ್ವ ಸಭೆ ಏರ್ಪಡಿಸಿ ಮಾಹಿತಿ ನೀಡಿದ್ದು ಉಪಯುಕ್ತವಾಯಿತು ಎಂದರು. ಹುದ್ದೆಗಳನ್ನು ತುಂಬಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರ ಮನವಿ ಮಾಡದರು.

ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಪ್ರೊ. ರಾಜನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಜ್‌ಶೇಖರ್ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಕಚೇರಿಯ ವಿಶೇಷಾಧಿಕಾರಿ ಶ್ರೀಧರ ಮಣಿಯಾನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.