ಉಪ್ಪುಂದ (ಬೈಂದೂರು): `ಜೀವನದ ದಾರಿದೀಪದಂತಿರುವ ಭಗವದ್ಗೀತೆಯು ಮನುಕುಲಕ್ಕೆ ಭಾರತ ನೀಡಿದ ಅಪೂರ್ವ ಕೊಡುಗೆ. ಅದರ ಅಧ್ಯಯನ, ಮನನದಿಂದ ಚಿತ್ತ ಶುದ್ಧಿಯಾಗುತ್ತದೆ. ಬದುಕಿನ ಮಾರ್ಗದ ದರ್ಶನವಾಗುತ್ತದೆ~ ಎಂದು ಕುಂದಾಪುರದ ಸೇವಾ ಸಂಗಮ ಟ್ರಸ್ಟ್ನ ಸಂಸ್ಥಾಪಕ ಡಾ.ಎಸ್. ಎನ್.ಪಡಿಯಾರ್ ಹೇಳಿದರು.
ಬೈಂದೂರಿನ ಸೀತಾರಾಮಚಂದ್ರ ದೇವಸ್ಥಾನ ಆಶ್ರಯದಲ್ಲಿ ನಡೆಯುವ ಗೀತಾ ಜಯಂತಿ ಉತ್ಸವದ ಪ್ರಯುಕ್ತ ವಲಯಾದ್ಯಂತ ಹಮ್ಮಿಕೊಳ್ಳಲಾದ ಗೀತಾ ಪಠಣ ಶಿಬಿರಕ್ಕೆ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಅವರು ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ರಾಮಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ರಾಮಕೃಷ್ಣ ಬಿಜೂರು ಅಧ್ಯಕ್ಷತೆ ವಹಿಸಿದ್ದರು.
`ಸೋಂದಾ ಸ್ವರ್ಣವಲ್ಲಿ ಶ್ರೀಗಳ ಪ್ರೇರಣೆಯಿಂದ ಆಯೋಜಿಸಿರುವ ಈ ಅಭಿಯಾನವನ್ನು ವಲಯದ ಎಲ್ಲ ಗ್ರಾಮಗಳ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರಗಳಲ್ಲಿ ನಡೆಸಲಾಗುವುದು. ಅವುಗಳಲ್ಲಿ ಪಾಲ್ಗೊಳ್ಳುವವರಿಗೆ ಕ್ಯಾಸೆಟ್ ಮತ್ತು ಪುಸ್ತಕಗಳನ್ನು ವಿತರಿಸಲಾಗುವುದು ಮತ್ತು ಪರಿಣತರಿಂದ ಮಾರ್ಗದರ್ಶನ ನೀಡಲಾಗುವುದು~ ಎಂದು ತಿಳಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಯು.ಚಂದ್ರಶೇಖರ ಹೊಳ್ಳ, `ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿರಿಸಿ ಈ ಜ್ಞಾನಯಜ್ಞ ಹಮ್ಮಿಕೊಳ್ಳಲಾಗಿದೆ~ ಎಂದರು.
ಶಿಬಿರದ ನಿರ್ದೇಶಕಿ ಯು.ವರಮಹಾಲಕ್ಷ್ಮಿ ಹೊಳ್ಳ ಶಿಬಿರಾರ್ಥಿಗಳಿಗೆ ಗೀತೆಯ 14ನೇಯ ಅಧ್ಯಾಯವನ್ನು ಬೋಧಿಸಿದರು. ದೀಟಿ ಸೀತಾರಾಮ ಮಯ್ಯ, ಮಹಿಳಾ ವೇದಿಕೆಯ ಅಧ್ಯಕ್ಷೆ ನಾಗರತ್ನ ಹೆಬ್ಬಾರ್, ಕೇಶವ ನಾಯಕ್, ಗಣಪತಿ ಹೋಬಳಿದಾರ್, ಗಣೇಶ ಪ್ರಸನ್ನ ಮಯ್ಯ, ವೀಣಾ ಶ್ಯಾನುಬಾಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.